ಚಿಕ್ಕಮಗಳೂರು: ನಗರದ ರೈಲ್ವೇ ನಿಲ್ದಾಣದ ಬಳಿ ಸ್ವಿಫ್ಟ್ ಕಾರಿನಲ್ಲಿ ಹುಲಿಯ ಉಗುರು, ಹಲ್ಲು ಹಾಗು ಮೂಳೆಗಳನ್ನ ಮಾರಲು ಯತ್ನಿಸುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಹಾಸನ ಜಿಲ್ಲೆ ಅಂಬುಗ ಗ್ರಾಮದ ಲೋಕೇಶ್ ಹಾಗೂ ಚಿಕ್ಕಮಗಳೂರು ತಾಲೂಕಿನ ಅರಿಶಿನಗುಪ್ಪೆ ಗ್ರಾಮದ ಸಾಗರ್ ಎಂದು ಗುರುತಿಸಲಾಗಿದೆ. ಬಂಧಿತರಿಂದ ಸುಮಾರು 10 ಲಕ್ಷ ಮೌಲ್ಯದ ಎಂಟು ಹುಲಿ ಉಗುರು, ಒಂದು ಹುಲಿ ಚರ್ಮ, ಒಂದು ದೊಡ್ಡ ಕೋರೆ ಹಲ್ಲು ಹಾಗೂ ಹದಿನಾಲ್ಕು ಹಲ್ಲಿನ ಮೂಳೆಗಳನ್ನ ವಶಪಡಿಸಿಕೊಂಡಿದ್ದಾರೆ. ಬಂಧಿತರು ಹಾಗೂ ಬಂಧಿತರಿಂದ ವಶಪಡಿಕೊಂಡ ವಸ್ತುಗಳನ್ನ ಚಿಕ್ಕಮಗಳೂರು ವಲಯ ಅರಣ್ಯಾಧಿಕಾರಿಗಳ ವಶಕ್ಕೆ ನೀಡಿದ್ದಾರೆ.
ಹುಲಿ, ಜಿಂಕೆ ಸೇರಿದಂತೆ ಕಾಡುಪ್ರಾಣಿಗಳ ಮೂಳೆಗಳಿಗೆ ವಿದೇಶದಲ್ಲಿ ಭಾರೀ ಬೇಡಿಕೆ ಇದೆ. ಸೌಂದರ್ಯವರ್ಧಕ, ಇಂಟಿರಿಯಲ್ ಡಿಸೈನ್ಗಳಿಗೂ ಇವುಗಳನ್ನ ಬಳಸುತ್ತಾರೆ. ಅದಕ್ಕಿಂತ ಮಿಗಿಲಾಗಿ ಲೈಂಗಿಕ ಶಕ್ತಿ ವೃದ್ಧಿಯಾಗಲು ಬಳಸುವ ಔಷಧಿಗಳಿಗೂ ಕಾಡುಪ್ರಾಣಿಗಳ ಮೂಳೆಗಳನ್ನ ಬಳಸುವುದರಿಂದ ಮಲೆನಾಡಲ್ಲಿ ಕಾಡುಪ್ರಾಣಿಗಳ ಭೇಟೆ ತಂಡ ಸಕ್ರಿಯವಾಗಿದೆ ಎಂಬ ಅನುಮಾನ ಪೊಲೀಸ್ ಹಾಗೂ ಅರಣ್ಯ ಅಧಿಕಾರಿಗಳಿಗಿದ್ದು, ಹೀಗಾಗಿ ಇಷ್ಟು ದೊಡ್ಡ ಪ್ರಮಾಣದ ಹುಲಿಯ ವಸ್ತುಗಳನ್ನ ತಂದು ಮಾರಾಟ ಮಾಡಲು ಯತ್ನಿಸುತ್ತಿರುವ ಇವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.