ಸೌದಿ ಅರೇಬಿಯಾ: ಸೌದಿ ಅರೇಬಿಯಾದ ರಿಯಾದಿನಲ್ಲಿರುವ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮೂಡುಗೆರೆಯ ಕುಮಾರ್ ಎಂಬವರು ಕೆಲವು ತೊಂದರೆಗಳಿಗೆ ಸಿಲುಕಿ ಊರಿಗೂ ಹೋಗಲು ಸಾಧ್ಯವಾಗದ ಸಂದರ್ಭದಲ್ಲಿ ಕೆಸಿಎಫ್ ಸೌದಿ ಅರೇಬಿಯಾ ಅವರ ನೆರವಾಗಿ ಅವರನ್ನು ಊರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ.

ಕುಮಾರ್ ರವರು ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ ಕೆಲವು ತೊಂದರೆಗಳು ಆಗಿ ಕಂಪನಿಯವರು ಕುಮಾರ್ ಮೇಲೆ ದೂರು ದಾಖಲಿಸಿದ್ದರು. ಕೇಸ್ ನ್ಯಾಯಾಲಯ ತಲುಪಿ ಅದರ ತೀರ್ಪು ಕುಮಾರ್ ವಿರುದ್ದವಾಗಿ ಬಂದ ಕಾರಣ ಅವರು ಊರಿಗೂ ಹೋಗಲು ಆಗದ ಪರಿಸ್ಥಿತಿ ಎದುರಾಗಿತ್ತು. ಈ ವಿಷಯವನ್ನು ಕುಮಾರ್ ರವರು ಕೆಸಿಎಫ್ ಜುಬೈಲ್ ಕಾರ್ಯಕರ್ತನಾದ ಮುಫೀದ್ ರವರಿಗೆ ತಿಳಿಸಿದರು. ಕೂಡಲೇ ಮುಫೀದ್ ರವರು ಕೆಸಿಎಫ್ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿ ಸಾಂತ್ವನ ಇಲಾಖೆಯ ಅಧ್ಯಕ್ಷರಾದ ಮುಹಮ್ಮದ್ ಮಲೆಬೆಟ್ಟುರವರ ಗಮನಕ್ಕೆ ತಂದರು.

ಗಂಭೀರತೆಯನ್ನು ಮನಗಂಡ ಮುಹಮ್ಮದ್ ಮಲೆಬೆಟ್ಟು ರವರು ಇದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಿದರು. ಕೆಸಿಎಫ್ ನೇತಾರರುಗಳಾದ ಮುಹಮ್ಮದ್ ಮಲೆಬೆಟ್ಟು, ಬಶೀರ್ ತಲಪ್ಪಾಡಿ ಹಾಗೂ ಹನೀಫ್ ಕಣ್ಣೂರು ರವರ ಪರಿಶ್ರಮದ ಫಲವಾಗಿ ಕುಮಾರ್ ರವರು ಭಾರತದ ರಾಯಭಾರಿ ಕಛೇರಿ ಮುಖಾಂತರ ಊರಿಗೆ ತಲುಪಿದ್ದಾರೆ.

ಕುಮಾರ್ ರವರಿಗೆ ನ್ಯಾಯಾಲಯ ದೊಡ್ಡದಾದ ಮೊತ್ತವೊಂದನ್ನು ದಂಡವಾಗಿ ವಿಧಿಸಿದ್ದು, ಇದಕ್ಕಾಗಿ ಕೆಸಿಎಫ್ ಸೌದಿ ಅರೇಬಿಯಾ, ಮಂಗಳೂರು ಅಸೋಸಿಯೇಷನ್ ಸೌದಿ ಅರೇಬಿಯಾ, ಕೆವಿನ್ ನಝರೆತ್ (ತಾಜ್ ಮಹಲ್ ರೆಸ್ಟೋರೆಂಟ್ ಬುರೈದಾ), ಯೋಗೀಶ್ ಡಿ ಪೂಜಾರಿ (ಪುಲಿ ರೆಸ್ಟೋರೆಂಟ್ ಜುಬೈಲ್), ಕರಾವಳಿ ವೆಲ್ಫೇರ್ ಅಸೋಸಿಯೇಷನ್ ರಿಯಾದ್, ಪ್ಲಾಂಟ್ ಸೊಲ್ಯೂಷನ್ಸ್ ಕನ್ಸ್ಟ್ರಕ್ಷನ್ ಕಂಪೆನಿ ಲಿಮಿಟೆಡ್, ಮಲನಾಡ್ ಗಲ್ಫ್ ಎಜ್ಯುಕೇಶನ್ ಆಂಡ್ ಚಾರಿಟೇಬಲ್ ಟ್ರಸ್ಟ್ ರಿಯಾದ್, ದಕ್ಷಿಣ ಕರ್ನಾಟಕ ಮುಸ್ಲಿಂ ಒಕ್ಕೂಟ ರಿಯಾದ್ ಸಮಿತಿಗಳು ಆರ್ಥಿಕ ಸಹಾಯವನ್ನೂ ಮಾಡಿದೆ.










