ಬಂಟ್ವಾಳ: ಜ್ಯೋತಿಷಿಗೆ ಮಹಿಳೆಯ ಸಹಿತ ಇಬ್ಬರು ರಾಡ್ ನಿಂದ ಹಲ್ಲೆಗೈದು ಪರಾರಿಯಾದ ಘಟನೆ ಇಂದು ಬಿ.ಸಿ.ರೋಡಿನ ಕಾಂಪ್ಲೆಕ್ಸ್ ಒಂದರಲ್ಲಿ ನಡೆದಿದೆ.
ಬಿ.ಸಿ.ರೋಡಿನ ಪದ್ಮಾ ಕಾಂಪ್ಲೆಕ್ಸ್ ನಲ್ಲಿರುವ ಶ್ರೀ ದುರ್ಗಾಪರಮೇಶ್ವರಿ ಜ್ಯೋತಿಷಾಲಯದಪಂಡಿತ್ ಲಕ್ಮೀಕಾಂತ್ ಭಟ್ ಎಂಬವರಿಗೆ ಇಬ್ಬರು ಅಪರಿಚಿತ ವ್ಯಕ್ತಿಗಳು ಚೂರಿ ಇರಿದು ಪರಾರಿಯಾಗಿದ್ದಾರೆ. ಜ್ಯೋತಿಷಿ ಪಂಡಿತ್ ಅವರು ಇವತ್ತು ತಮ್ಮ ಆಫೀಸಿನಲ್ಲಿ ಕುಳಿತಿದ್ದರು. ಏಕಾಏಕಿ ನುಗ್ಗಿ ಬಂದ ಇಬ್ಬರು ಆಗಂತುಕರು ಒಳಕ್ಕೆ ನುಗ್ಗಿ ಇರಿದು ಪರಾರಿಯಾಗಿದ್ದಾರೆ. ಇರಿತ ಸಂಭವಿಸಿದ ತಕ್ಷಣ ಶಾಕ್ ನಿಂದ ಅವರು ಮೂರ್ಚೆ ಹೋಗಿದ್ದಾರೆ. ಆದರೆ ಸ್ವಲ್ಪ ಹೊತ್ತಿನ ನಂತರ ಅವರಿಗೆ ಮತಿ ಮರುಕಳಿಸಿದೆ.
ಎಚ್ಚರ ಬಂದ ಬಳಿಕ ಅವರೇ ಎದ್ದು ರೂಮ್ ನಿಂದ ಹೊರಬಂದಿದ್ದಾರೆ. ರಕ್ತಸಿಕ್ತ ವಾದ ರೀತಿಯಲ್ಲಿ ಪಂಡಿತ್ ಅವರನ್ನು ಕಂಡು ಇವರ ಕೋಣೆಯ ಪಕ್ಕದ ಕೋಣೆಯವರು ನೋಡಿ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ನಂತರ ವೈದ್ಯರ ಸಲಹೆಯ ಮೇರೆಗೆ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇದಕ್ಕು ಮೊದಲು ಕರೆ ಮಾಡಿ ಜ್ಯೋತಿಷ್ಯ ಕೇಳಲು ಸಮಯವನ್ನು ಕೋರಿದ್ದನೆನ್ನಲಾಗಿದ್ದು ಈ ಸಂದರ್ಭ ಲಕ್ಷ್ಮೀಕಾಂತ್ ಅವರು ಸಂಜೆ 5 ಗಂಟೆಯವರೆಗೆ ಮಾತ್ರ ಇರುವುದಾಗಿ ತಿಳಿಸಿದ್ದರೆನ್ನಲಾಗಿದೆ.
ಈ ಘಟನೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ, ವೈಯಕ್ತಿಕ ದ್ವೇಷವೇ ಕಾರಣ ಎನ್ನಲಾಗಿದೆ. ಸುದ್ದಿ ತಿಳಿದ ಬಂಟ್ವಾಳ ನಗರ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಎಸ್ ಐ ಕಲೈಮಾರ್ ಮತ್ತವರ ಸಿಬ್ಬಂದಿ, ಇನ್ಸ್ ಪೆಕ್ಟರ್ ಚೆಲುವರಾಜ್ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿ ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಮೂಲತ ಬಾಗಲಕೋಟೆ ನಿವಾಸಿಯಾಗಿರುವ ಜ್ಯೋತಿಷಿ ಲಕ್ಷ್ಮೀಕಾಂತ್ ಭಟ್ 30 ವರ್ಷದಿಂದ ಮಂಗಳೂರಿನ ಕಾವೂರಿನಲ್ಲಿ ವಾಸ್ತವ್ಯವಿದ್ದು 8 ವರ್ಷಗಳಿಂದ ಬಿ.ಸಿ.ರೋಡಿನಲ್ಲಿ ವಾಣಿಜ್ಯ ಸಂಕೀರ್ಣದಲ್ಲಿ ಜ್ಯೋತಿಷ್ಯಾಲಯ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.