ಮಂಗಳೂರು: ವ್ಯಕ್ತಿಯೊಬ್ಬ ಅನ್ಯಕೋಮಿನ ಯುವತಿ ಯನ್ನು ವಿವಾಹವಾಗಿದ್ದಾನೆ ಎನ್ನುವ ಆರೋಪದ ಪ್ರಕರಣ ತಿರುವು ಪಡೆದುಕೊಂಡಿದ್ದು, ಆತನ ವಿರುದ್ಧವೇ ಪೊಲೀಸರು ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬೋಳಾರದ ಗಂಗಾಧರ್ (62) ವಿರುದ್ಧ ಈಗ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ. ಆತನಿಗೆ ಮೂರು ಮದುವೆಯಾಗಿದ್ದು, ಇನ್ನೂ ಕೆಲವು ಮಹಿಳೆಯರನ್ನು ವಂಚಿಸಿರುವ ಆರೋಪಗಳು ಕೇಳಿ ಬರುತ್ತಿರುವುದರಿಂದ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಗಂಗಾಧರ ಮದುವೆಯಾಗಿದ್ದಾನೆ ಎನ್ನಲಾಗಿರುವ ಮುಸ್ಲಿಂ ಯುವತಿಯೇ ಕದ್ರಿ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಗಂಗಾಧರನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಗಂಗಾಧರ, ಮುಸ್ಲಿಂ ಯುವತಿಯನ್ನು ಕೆಲ ತಿಂಗಳ ಹಿಂದೆ ತನ್ನ ಮಿತ್ರರಾದ ಸೈಯದ್, ಶಬೀರ್ ಮತ್ತು ಮಹಮ್ಮದ್ ಅವರೊಂದಿಗೆ ಸಂಪರ್ಕಿಸಿ, ತನ್ನ ಹೆಸರು ಮಹಮ್ಮದ್ ಅನೀಸ್ ಎಂದು ಪರಿಚಯಿಸಿಕೊಂಡಿದ್ದ. 22ರ ಹರೆಯದ ಯುವತಿ ಮೂಲತಃ ಪುತ್ತೂರಿನವಳಾಗಿದ್ದು, ಈ ಹಿಂದೆ ಮದುವೆಯಾಗಿ ಪತಿ ಅಪಘಾತದಲ್ಲಿ ಸಾವನ್ನಪ್ಪಿದ್ದು, ಒಂದು ಮಗುವಿದೆ. ಆತನ ಮಿತ್ರರೂ ಆಕೆಯನ್ನು ಅನೀಸ್ಗೆ ತರಕಾರಿ ವ್ಯಾಪಾರ ಇದೆ, ಕುಟುಂಬದ ಜವಾಬ್ದಾರಿಯ ಒತ್ತಡದಿಂದ ಮದುವೆಯಾಗಿರಲಿಲ್ಲ. ಈಗ ವಿವಾಹವಾಗುತ್ತಿದ್ದಾನೆ ನಿನ್ನ ಬದುಕು ಕೂಡಾ ಒಳ್ಳೆಯದಾಗುತ್ತದೆ ಎಂದು ನಂಬಿಸಿದ್ದರು.

ಅದರಂತೆ ಕಳೆದ ವರ್ಷ ಡಿ. 21ರಂದು ಇಬ್ಬರ ವಿವಾಹ ನಡೆದಿತ್ತು. ಆದರೆ ಆ ಬಳಿಕ ಕೆಲವೇ ದಿನಗಳಲ್ಲಿ ಮಹಿಳೆಗೆ ಈ ವ್ಯಕ್ತಿ ನನ್ನ ಧರ್ಮದವನಲ್ಲ; ಜತೆಗೆ ಬೇರೆ ಅಕ್ರಮ ಸಂಬಂಧಗಳೂ ಇವೆ ಎನ್ನುವುದು ಗೊತ್ತಾದ ಬಳಿಕ ಆತನಿಂದ ಅಂತರ ಕಾಯ್ದುಕೊಳ್ಳಲು ಯತ್ನಿಸಿದ್ದರು.

ಗಂಗಾಧರ ಯಾನೆ ಅನೀಸ್ ಬಲಾತ್ಕಾರವಾಗಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ. ಎರಡು ತಿಂಗಳ ಗರ್ಭಿಣಿಯಾದ ಬಳಿಕ ಲೇಡಿಗೋಶನ್ಗೆ ಕರೆದೊಯ್ದು ಮಾತ್ರೆ ತಿನ್ನಿಸಿ ಗರ್ಭಪಾತ ಮಾಡಿಸಿದ್ದಾನೆ ಎಂದು ಮಹಿಳೆ ದೂರು ನೀಡಿದ್ದಾರೆ.

ಈ ಎಲ್ಲ ವಿದ್ಯಮಾನಗಳ ನಡುವೆ ಮಾ. 23ರಂದು ಗಂಗಾಧರನ ಮೊದಲ ಪತ್ನಿ ಯಶೋದಾ ತನ್ನ ಗಂಡನನ್ನು ಯಾರೋ ಅಪಹರಿಸಿ ಬಲವಂತವಾಗಿ ಮತಾಂತರಗೊಳಿಸಿ ವಿವಾಹ ನಡೆಸಿದ್ದಾರೆ ಎಂದು ದೂರು ನೀಡಿದ್ದರು.

ಪೊಲೀಸರು ಗಂಗಾಧರನನ್ನು ವಿಚಾರಣೆ ನಡೆಸಿದಾಗ ಎಲ್ಲ ವಿಷಯಗಳು ಬೆಳಕಿಗೆ ಬಂದಿವೆ. ಆತನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದ್ದು, ಬಂಧಿಸಲಾಗಿದೆ ಎಂದು ಆಯುಕ್ತರು ವಿವರಿಸಿದರು. ಡಿಸಿಪಿ ಹರಿರಾಂ ಶಂಕರ್ ಸುದ್ದಿಗೋಷ್ಠಿಯಲ್ಲಿದ್ದರು.

3 ಮದುವೆ; ಐವರು ಮಕ್ಕಳು! : ಗಂಗಾಧರ್ಗೆ ಯಶೋದಾ ಮೊದಲ ಪತ್ನಿಯಾಗಿದ್ದು, ಇಬ್ಬರು ಮಕ್ಕಳು ವಿದೇಶದಲ್ಲಿದ್ದಾರೆ. 25 ವರ್ಷ ಹಿಂದೆಯೇ ಇನ್ನೋರ್ವ ಮಹಿಳೆಯ ಜತೆ ಕೂಡ ವಿವಾಹವಾಗಿದ್ದು, ಆಕೆಯ ಮೂಲಕ ಮೂವರು ಮಕ್ಕಳನ್ನು ಪಡೆದಿದ್ದಾನೆ. ಬಳಿಕ ಮುಸ್ಲಿಂ ಯುವತಿಯನ್ನು ವಿವಾಹವಾಗಿದ್ದಾನೆ. ಈ ಬಗ್ಗೆ ತನಿಖೆ ಮುಂದುವರಿಸಿದ್ದೇವೆ ಎಂದು ಆಯುಕ್ತ ಎನ್. ಶಶಿಕುಮಾರ್ ತಿಳಿಸಿದರು.
