


ಮಂಗಳೂರು: ನಗರದ ವೆನ್ಲಾಕ್ ಜಿಲ್ಲಾಸ್ಪತ್ರೆಯ ಭವಿಷ್ಯದ ಅಭಿವೃದ್ದಿಯ ದೃಷ್ಟಿಯಿಂದ ನಗರದ ಕೇಂದ್ರಭಾಗದ ಹೊರವಲಯದಲ್ಲಿ ಜಮೀನು ಕಾಯ್ದಿರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸೂಚಿಸಿದ್ದಾರೆ.
ಅವರು ಸೋಮವಾರ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸಭೆಯಲ್ಲಿ ಶಾಸಕ ಹರೀಶ್ ಪೂಂಜಾ ಅವರು ವಿಷಯ ಪ್ರಸ್ತಾಪಿಸಿ, ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಪ್ರಸ್ತುತ ಇರುವ ಜಮೀನಿನಲ್ಲಿ ವಿವಿಧ ಕಟ್ಟಡಗಳು ತುಂಬಿದ್ದು, ಭವಿಷ್ಯದ ವಿಸ್ತರಣೆ ಹಾಗೂ ಹೊಸ ಅಭಿವೃದ್ಧಿ ಯೋಜನೆಗಳಿಗೆ ಸ್ಥಳಾವಕಾಶದ ಕೊರತೆ ಎದುರಾಗಬಹುದು. ಈ ನಿಟ್ಟಿನಲ್ಲಿ ನಗರ ಸಂಪರ್ಕಿಸುವ ಹೆದ್ದಾರಿಯ ಸಮೀಪ ಜಾಗ ಕಾಯ್ದಿರಿಸುವಂತೆ ಅಗ್ರಹಿಸಿದರು.
ಇದಕ್ಕೆ ಸ್ಪಂದಿಸಿದ ಸಚಿವರು, ಈ ಬಗ್ಗೆ ಜಮೀನು ಗುರುತಿಸಲು ಅಗತ್ಯ ಕ್ರಮ ಕ್ಯೆಗೊಳ್ಳಲು ಸೂಚಿಸಿದರು.ವೆನ್ಲಾಕ್ ಆಸ್ಪತ್ರೆಯ ಹಾಲಿ ಹೊರರೋಗಿ ವಿಭಾಗವನ್ನು ತೆರವುಗೊಳಿಸಿ, 4 ಮಹಡಿಗಳ ಹೊಸ ಕಟ್ಟಡ ನಿರ್ಮಾಣ ಶೀಘ್ರದಲ್ಲಿ ಆರಂಭವಾಗಲಿದೆ ಎಂದು ವೆನ್ಲಾಕ್ ಅಧೀಕ್ಷಕ ಡಾ. ಶಿವಪ್ರಸಾದ್ ತಿಳಿಸಿದರು.
ಬೆಳ್ತಂಗಡಿಗೆ ಡಯಾಲಿಸ್ ಕೇಂದ್ರಕ್ಕೆ ಬೇಡಿಕೆ : ಬೆಳ್ತಂಗಡಿ ತಾಲೂಕು ಆಸ್ಪತ್ರೆಯಲ್ಲಿ ಡಯಾಲಿಸಿಸ್ ಕೇಂದ್ರ ಮತ್ತು ಶವಗಾರ ಸ್ಥಾಪಿಸುವಂತೆ ಶಾಸಕ ಹರೀಶ್ ಪೂಂಜಾ ಕೋರಿದರು.
ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಸ್ವಂತ ನಿವೇಶನ ಲಭ್ಯವಿಲ್ಲದ ಅಂಗನವಾಡಿ ಮತ್ತು ಅರೋಗ್ಯ ಉಪಕೇಂದ್ರಗಳಿಗೆ ಶೀಘ್ರದಲ್ಲಿ ನಗರಪಾಲಿಕೆಯ ಅಥವಾ ಕಂದಾಯ ಜಾಗವನ್ನು ಮಂಜೂರು ಮಾಡಲು ಉಸ್ತುವಾರಿ ಸಚಿವರು ತಿಳಿಸಿದರು.








