ಮಹಾರಾಷ್ಟ್ರ: ಶೀಲ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಹಿನ್ನೆಲೆಯಲ್ಲಿ ಇಬ್ಬರು ವಿವಾಹಿತೆಯರನ್ನು ಗಂಡಂದಿರೇ ಮನೆಯಿಂದ ಹೊರಹಾಕಿ ಅಮಾನವೀಯತೆ ಮೆರೆದ ಘಟನೆ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ನಡೆದಿದೆ.
ಈ ಕ್ರಮವನ್ನು ಸ್ಥಳೀಯ ಸಮುದಾಯದ ಮುಖಂಡರೂ ಬೆಂಬಲಿಸಿದ್ದಾರೆ. ಗಂಡಂದಿರು ಮೌಖಿಕವಾಗಿ ನೀಡಿರುವ ವಿಚ್ಛೇದನಕ್ಕೆ ಪಂಚಾಯತ್ ಸಭೆಯಲ್ಲಿ ಸಮ್ಮತಿಸಲಾಗಿದೆ.
2020ರ ನವೆಂಬರ್ನಲ್ಲಿ ಕಂಬರ್ಜಾಟ್ ಸಮುದಾಯಕ್ಕೆ ಸೇರಿದ ಇಬ್ಬರು ಸಹೋದರಿಯರು ಅದೇ ಸಮುದಾಯದ ಸಹೋದರರನ್ನು ವಿವಾಹವಾಗಿದ್ದರು. ಮೊದಲ ರಾತ್ರಿ ಸಮಯದಲ್ಲಿ ಆ ಸಮುದಾಯದ ಸಂಪ್ರದಾಯದಂತೆ ಅಕ್ಕತಂಗಿಯರ ಶೀಲ ಪರೀಕ್ಷಿಸಲಾಗಿದೆ.
ಈ ಪರೀಕ್ಷೆಯಲ್ಲಿ ಅಕ್ಕ ವಿಫಲಳಾಗಿದ್ದಾಳೆ. ಆದರೆ ತಂಗಿ ಉತ್ತೀರ್ಣಳಾಗಿದ್ದಾಳೆ. ಹೀಗಾಗಿ ಅಕ್ಕನ ಮೇಲೆ ಶೀಲ ಕಳೆದುಕೊಂಡ ಆರೋಪ ಹೊರಿಸಲಾಗಿದ್ದು, ಈಕೆಯ ಸಹೋದರಿಗೆ ‘ಶೀಲಗೆಟ್ಟವಳ ತಂಗಿ’ ಎಂಬ ಹಣೆಪಟ್ಟಿ ಕಟ್ಟಿ ತಂಗಿಯನ್ನೂ ಮನೆಯಿಂದ ಹೊರಹಾಕಲಾಗಿದೆ. ಅಷ್ಟೇ ಅಲ್ಲ, ಪರಿಹಾರವಾಗಿ ಹತ್ತು ಲಕ್ಷ ರೂ.ನೀಡುವಂತೆ ಹಿಂಸಿಸಲಾಗಿದೆ.
ವಿಷಯ ತಿಳಿದ ಪೊಲೀಸರು ಇಂತಹ ಕುಕೃತ್ಯವೆಸಗಿದ ಸಹೋದರರು ಮತ್ತು ಅವರ ತಾಯಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜಾಟ್ ಪಂಚಾಯತ್ ಮುಖಂಡರ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡಿದ್ದಾರೆ.