ಕಾರ್ಕಳ: ಕೋವಿಡ್ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಶವವನ್ನು ಅಂತ್ಯ ಸಂಸ್ಕಾರಕ್ಕೆಂದು ಕಾರ್ಕಳದ ಕರಿಯಕಲ್ಲು ಸ್ಮಶಾನಕ್ಕೆ ಕರೆತಂದಿದ್ದ ವೇಳೆ ಮೃತ ದೇಹವು ಬದಲಾಗಿರುವುದು ಸಂಬಂಧಿಕರಿಗೆ ತಿಳಿದು ಶವವನ್ನು ವಾಪಸ್ ಕಳಿಸಿದ ಘಟನೆ ಸೋಮವಾರ ನಡೆದಿದೆ.
ಮೃತಪಟ್ಟವರನ್ನು ಶೃಂಗೇರಿ ಮೂಲದ 44ರ ವಯಸ್ಸಿನ ವ್ಯಕ್ತಿ ಎಂದು ಗುರುತಿಸಲಾಗಿದ್ದು, ಅವರು ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದರು. ಕಾರ್ಕಳದ ತನ್ನ ಪತ್ನಿ ಮನೆಗೆ ಬಂದಿದ್ದ ಅವರಿಗೆ ಸೋಂಕು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಮಂಗಳೂರು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದು, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಶವವನ್ನು ಅಂತ್ಯಸಂಸ್ಕಾರ ಮಾಡಲೆಂದು ಕರಿಯಕಲ್ಲು ರುದ್ರಭೂಮಿಗೆ ಅಂಬುಲೆನ್ಸ್ ಮೂಲಕ ತಂದಿದ್ದು ಸಂಬಂಧಿಕರಿಗೆ ಶವ ಅದಲು ಬದಲಾಗಿರುವುದು ಗೊತ್ತಾಗಿದೆ. ಶವ ತಮಗೆ ಸೇರಿದ ವ್ಯಕ್ತಿಯದ್ದಲ್ಲ ಎಂದು ಮನವರಿಕೆಯಾದ ಬಳಿಕ ಶವವನ್ನು ವಾಪಸ್ ಕಳಿಸಲಾಗಿದೆ.
ಆಸ್ಪತ್ರೆಯ ಬೇಜಾವಾಬ್ದಾರಿಗೆ ಮೃತ ವ್ಯಕ್ತಿಯ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಆಸ್ಪತ್ರೆ ಸಿಬ್ಬಂದಿಯ ಎಡವಟ್ಟಿನಿಂದ ಈ ರೀತಿ ಆಗಿದೆ ಎನ್ನಲಾಗಿದೆ.