ಪುತ್ತೂರು: ಲಾರಿ ಚಾಲಕನ ಮೇಲೆ ಹಲ್ಲೆ ನಡೆಸಿ ಪರಾರಿಯಾಗುತ್ತಿರುವ ವೇಳೆ ಕಾರಿನಲ್ಲಿದ್ದ ತಂಡವನ್ನು ತಡೆಯಲು ಮುಂದಾದಾಗ ಪೊಲೀಸರ ಮೇಲೆ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿ ನಾಲ್ವರ ಮೇಲೆ ಪ್ರಕರಣ ದಾಖಲಾಗಿದೆ.

ಪುತ್ತೂರು ನಗರ ಠಾಣೆ ಎಸೈ ಜಂಬುರಾಜ ಮಹಾಜನ್ ಅವರು ದೂರು ನೀಡಿದ್ದು, ಅದರಂತೆ ಉಳ್ಳಾಲ ಕೋಟೆಪುರ ನಿವಾಸಿಗಳಾದ ಯು.ಕೆ. ಮೊಹಮ್ಮದ್ ಅರಾಫತ್ (35), ಯು.ಕೆ ನಾಸಿರ್, ಮಂಗಳೂರು ಸೋಮೇಶ್ವರ ನಿವಾಸಿ ಮಹಮ್ಮದ್ ಆಸಿಫ್, ಅರ್ಫೈನ್ ವಿರುದ್ಧ ಪ್ರಕರಣ ದಾಖಲಾಗಿದೆ.

ಬಂಟ್ವಾಳ ತಾಲೂಕಿನ ಪೆರಾಜೆ ಎಂಬಲ್ಲಿ ಆರೋಪಿಗಳು ಕಾರಿನಲ್ಲಿ ಉಪ್ಪಿನಂಗಡಿ ಕಡೆಯಿಂದ ಮಾಣಿ ಕಡೆಗೆ ಹೋಗುತ್ತಿದ್ದಾಗ ಮಾಣಿ ಕಡೆಯಿಂದ ಉಪ್ಪಿನಂಗಡಿ ಕಡೆಗೆ ಬರುತ್ತಿದ್ದ ಲಾರಿಗೆ ಸೈಡ್ ಕೊಡುವ ವಿಚಾರದಲ್ಲಿ ಕಾರು ಚಾಲಕ ಹಾಗೂ ಲಾರಿ ಚಾಲಕರಿಗೆ ಪರಸ್ಪರ ಮಾತಿನ ಚಕಮಕಿ ನಡೆದಿದೆ.

ಬಳಿಕ ಕಾರು ಚಾಲಕ ಮತ್ತು ಕಾರಿನಲ್ಲಿದ್ದವರು ಲಾರಿ ಚಾಲಕನಿಗೆ ಬಾಟಲಿಯಿಂದ ಹಲ್ಲೆ ಮಾಡಿ ಕಾರಿನ ಚಾಲಕನು ಹಲ್ಲೆ ನಡೆಸಿದ ಬಗ್ಗೆ ತಪ್ಪಿಕೊಳ್ಳುವ ಉದ್ದೇಶದಿಂದ ಕಾರನ್ನು ಉಪ್ಪಿನಂಗಡಿ ಕಡೆಗೆ ಚಲಾಯಿಸಿಕೊಂಡು ಬಂದು ಉಪ್ಪಿನಂಗಡಿಯಿಂದ ಪುತ್ತೂರು ಕಡೆಗೆ ನೆಕ್ಕಿಲಾಡಿ ಎಂಬಲ್ಲಿ ಮುಂದಕ್ಕೆ ಬರುವ ಸಮಯ ನೆಕ್ಕಿಲಾಡಿ ಚೆಕ್ ಪಾಯಿಂಟ್ನಲ್ಲಿದ್ದ ಪೊಲೀಸರು ಕಾರನ್ನು ನಿಲ್ಲಿಸಲು ಸೂಚಿಸಿದ್ದಾರೆ.

ಆರೋಪಿಗಳು ಕಾರನ್ನು ನಿಲ್ಲಿಸಿದೆ ಪುತ್ತೂರು ಕಡೆಗೆ ಚಲಾಯಿಸಿಕೊಂಡು ಬರುತ್ತಿದ್ದ ಬಗ್ಗೆ ನಗರ ಎಸೈ ಅವರಿಗೆ ದೊರೆತ ಮಾಹಿತಿಯಂತೆ ಸಿಬ್ಬಂದಿಯವರು ಚಿಕ್ಕಮುಡ್ನೂರು ಗ್ರಾಮದ ಕೆಮ್ಮಾಯಿ ಎಂಬಲ್ಲಿ ಕಾರನ್ನು ತಡೆದು ನಿಲ್ಲಿಸಿದ ವೇಳೆ ಕಾರು ಚಾಲಕ ಹಾಗೂ ಕಾರಿನಲ್ಲಿದ್ದ ನಾಲ್ಕು ಜನ ಆರೋಪಿಗಳು ಸಿಬ್ಬಂದಿಗಳನ್ನು ಕೈಯಿಂದ ದೂಡಿ, ಕಾಲಿನಿಂದ ತುಳಿದು ಸಾರ್ವಜನಿಕ ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು. ಹಲ್ಲೆಗೊಳಗಾದ ಪೊಲೀಸ್ ಸಿಬ್ಬಂದಿ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಯನ್ನು ಪಡೆದುಕೊಂಡಿದ್ದಾರೆ.










