ಬೆಂಗಳೂರು: ಬೈಕ್ ಅಪಘಾತದಲ್ಲಿ ತೀವ್ರ ಗಾಯಗೊಂಡು ಬೆಂಗಳೂರಿನ ಬನ್ನೇರುಘಟ್ಟದಲ್ಲಿರುವ ಅಪೋಲೋ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಬಗ್ಗೆ ಆಸ್ಪತ್ರೆ ವೈದ್ಯ ಡಾ ಅರುಣ್ ನಾಯ್ಕ್ ಮಾಧ್ಯಮಗಳ ಮುಂದೆ ಪ್ರತಿಕ್ರಿಯೆ ನೀಡಿದ್ದಾರೆ.
ಸಂಚಾರಿ ವಿಜಯ್ ಅವರಿಗೆ ಅಪಘಾತವಾಗಿ 36 ಗಂಟೆಯಾಗಿದೆ. ಮೊನ್ನೆ ಮಧ್ಯರಾತ್ರಿ ಸುಮಾರಿಗೆ ಆಸ್ಪತ್ರೆಗೆ ಅವರನ್ನು ಕರೆತಂದಾಗ ಸಂಪೂರ್ಣ ಪ್ರಜ್ಞಾಹೀನ ಸ್ಥಿತಿಯಲ್ಲಿಯೇ ಇದ್ದರು. ಉಸಿರಾಡುತ್ತಿದ್ದ ಕಾರಣ ಸಿಟಿ ಸ್ಕ್ಯಾನ್ ಮಾಡಿ ನೋಡಿದಾಗ ಮೆದುಳಿನ ಬಲಭಾಗಕ್ಕೆ ತೀವ್ರ ಏಟಾಗಿತ್ತು. ಮೆದುಳಿನ ಒಳಗೆ ರಕ್ತಸ್ರಾವವಾಗುತ್ತಿತ್ತು. ಹೀಗಾಗಿ ಅವರ ಕುಟುಂಬಸ್ಥರ ಜೊತೆ ಮಾತುಕತೆ ನಡೆಸಿ ಸರ್ಜರಿ ಮಾಡಲು ನಿರ್ಧರಿಸಿದೆವು ಎಂದಿದ್ದಾರೆ.
ಬೆಳಗ್ಗೆ 4-4.30ರ ಹೊತ್ತಿಗೆ ಮೆದುಳಿನ ಸರ್ಜರಿ ಮಾಡಿದೆವು. ರಕ್ತಸ್ರಾವ ತೆಗೆದು ಊತ ಕಡಿಮೆ ಮಾಡಲು ನೋಡಿದೆವು. ವೈದ್ಯಕೀಯ ಶಿಷ್ಟಾಚಾರ ಪ್ರಕಾರ ಏನು ಮಾಡಲು ಸಾಧ್ಯವೋ ಅದನ್ನೆಲ್ಲ ಮಾಡಿದ್ದೇವೆ. ನಂತರ ನ್ಯೂರೋ ಐಸಿಯು ವಿಭಾಗಕ್ಕೆ ವರ್ಗಾಯಿಸಿದೆವು. ಈಗ ಅವರ ಮೆದುಳಿನಲ್ಲಿ ಯಾವುದೇ ಚೇತರಿಕೆ ಕಂಡುಬರುತ್ತಿಲ್ಲ, ಊತ ಕಡಿಮೆಯಾಗುತ್ತಿಲ್ಲ. ಉಸಿರಾಟವನ್ನೂ ವಿಜಯ್ ಅವರು ಮಾಡುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಮೆದುಳು ನಿಷ್ಕ್ರಿಯಗೊಂಡ ಹಿನ್ನಲೆ ಅವರ ದೇಹದ ಅಂಗಾ0ಗ ದಾನವನ್ನು ಮಾಡುವುದಕ್ಕೆ ಕುಟುಂಬಸ್ಥರು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.