ಮಂಗಳೂರು: ಮಂಗಳೂರಿಗರ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಘಟನೆ ಕ್ಲಬ್ ಹೌಸ್ ಎಂಬ ಮೊಬೈಲ್ ಅಪ್ಲಿಕೇಶನ್ ನಲ್ಲಿ ನಡೆದಿದೆ.

‘ನಮ್ಮೂರಲ್ಲಿ ದೇವಸ್ಥಾನಗಳಿಲ್ವಾ, ನಮಗೆ ನಮ್ಮ ಮನೆ ದೇವರಿಲ್ಲವೇ. ಅದನ್ನು ಬಿಟ್ಟು ಧರ್ಮಸ್ಥಳ, ಸುಬ್ರಹ್ಮಣ್ಯ ಹೋಗುವುದನ್ನು ಮೊದಲು ನಾವು ನಿಲ್ಲಿಸಬೇಕು. ಮಂಗಳೂರಿಗರ ಸೊಕ್ಕು ಮುರಿಯಬೇಕು ಎಂದು ಕರುನಾಡು-ತುಳುನಾಡು ಎಂಬ ಕ್ಲಬ್ ಹೌಸ್ನಲ್ಲಿ ನಡೆಯುತ್ತಿದ್ದ ಆಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕರಾವಳಿಗರು ಕನ್ನಡ ವಾಹಿನಿಗಳಲ್ಲಿ ಮೆರೆಯುತ್ತಿದ್ದಾರೆ. ಯಾವಾಗ ಅನುಶ್ರೀ ಎನ್ನುವವರು ಝೀ ಕನ್ನಡಕ್ಕೆ ಬಂದರೋ ಅಂದಿನಿಂದ ಕನ್ನಡ ವಾಹಿನಿಗಳಲ್ಲಿ ಕನ್ನಡಿಗರು ತುಂಬಿಕೊಂಡಿದ್ದಾರೆ. ಅವರನ್ನು ಮೊದಲು ಹೊರಗಿಡಬೇಕು, ಕರಾವಳಿ ಕಡೆಗೆ ಪ್ರವಾಸ ಹೋಗುವುದನ್ನು ಎಲ್ಲಿಯವರೆಗೆ ನಿಲ್ಲಿಸುವುದಿಲ್ಲವೋ, ಅಲ್ಲಿಯವರೆಗೆ ಮಂಗಳೂರಿಗರ ಸೊಕ್ಕನ್ನು ಮುರಿಯಲಾಗುವುದಿಲ್ಲ. ಮಂಜುನಾಥ ಸ್ವಾಮಿ ದೇವಸ್ಥಾನ ನಿಮ್ಮಲ್ಲೇ ಕಟ್ಟಿಕೊಳ್ಳಿ ಸಾರ್ ಯಾರು ಬೇಡ ಅಂತಾರೆ. ಅದು ಬಿಟ್ಟು ಕರಾವಳಿಗೆ ಯಾಕೆ ಹೋಗುತ್ತೀರಾ ಎಂದು ಪ್ರಶ್ನಿಸಿದ್ದಾನೆ. ಹೀಗೆ ಕರಾವಳಿಗರ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಶರತ್ ಕುಮಾರ್ ಎಂಬಾತ ಕ್ಲಬ್ ಹೌಸ್ನಲ್ಲಿ ನಡೆದ ಚರ್ಚೆಯೊಂದರಲ್ಲಿ ಮಾತನಾಡಿದ್ದಾನೆ. ಈತನ ಆಡಿಯೋ ವೈರಲ್ ಆಗುತ್ತಿದ್ದಂತೆ ಕರಾವಳಿಗರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.











