ಮಂಗಳೂರು: ದುಡ್ಡಿಲ್ಲವೆಂದು ಪಕ್ಕದ ಮನೆಗೇ ಕನ್ನ ಹಾಕಿದವನನ್ನು ಕೆಲವೇ ಗಂಟೆಗಳಲ್ಲಿ ಬಂಧಿಸುವಲ್ಲಿ ಪಣಂಬೂರು ಪೊಲೀಸರು ಯಶಸ್ವಿಯಾಗಿದ್ದಾರೆ.

ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ವ್ಯಕ್ತಿಯೊಬ್ಬ ಹಣಕಾಸಿನ ತೊಂದರೆಯಲ್ಲಿದ್ದು, ಸಾಲ ಮಾಡಿಕೊಂಡಿದ್ದ. ಕೊನೆಗೆ ಸಾಲ ತೀರಿಸುವುದು ಹೇಗೆ ಎಂದು ಉಪಾಯವೊಂದನ್ನು ಮಾಡಿದ್ದಾನೆ. ಪಕ್ಕದ ಮನೆಯಲ್ಲೇ ಕಳ್ಳತನ ಮಾಡಿದ್ದಾನೆ. ಅಂದ ಹಾಗೆ ಕಳ್ಳತನ ನಡೆದ ಮನೆಯವರೊಂದಿಗೆ ಆತ ಬಹಳ ಆತ್ಮೀಯತೆಯಿಂದ ಇದ್ದ.

ಆ ಮನೆಯ ಆಗು ಹೋಗುಗಳನ್ನು ತಿಳಿದುಕೊಂಡಿದ್ದನು. ಮನೆಯವರು 2 ದಿನಗಳ ಕಾಲ ಮನೆಯಲ್ಲಿ ಇಲ್ಲದ ಸಂದರ್ಭ ನೋಡಿ ಮನೆಯ ಹೆಂಚು ತೆಗೆದು ಒಳ ಹೋಗಿ ಕಳ್ಳತನ ಮಾಡಿದ್ದಾನೆ.

ಮನೆಯವರು ಬಂದ ಬಳಿಕ ಪ್ರಕರಣ ಬೆಳಕಿಗೆ ಬಂದಿದ್ದು, ಪಣಂಬೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ತಕ್ಷಣ ಕಾರ್ಯಾಚರಣೆ ನಡೆಸಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಯಿಂದ ಪೊಲೀಸರು 248.600 ಗ್ರಾಂ ತೂಕದ 11,06,270 ರೂ. ಮೌಲ್ಯದ ಚಿನ್ನಾಭರಣ ಸಹಿತ 4000 ರೂ. ನಗದು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










