ವಿಟ್ಲ: ವಿಶ್ವ ಹಿಂದೂ ಪರಿಷತ್ ಬಜರಂಗದಳ ಘಟಕ ಶ್ರೀ ಕೃಷ್ಣ ಶಾಖೆ ಪೆರುವಾಯಿ ಹಾಗೂ ಹಿಂದೂ ಹೃದಯ ಸಂಗಮ ಜನಸೇವಾ ಕೇಂದ್ರ ಪೆರುವಾಯಿ ಇದರ ವತಿಯಿಂದ ರಕ್ತದಾನ ಶಿಬಿರವು ಜು.25 ಆದಿತ್ಯವಾರದಂದು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಕೊಲ್ಲತ್ತಡ್ಕ ಪೆರುವಾಯಿಯಲ್ಲಿ ನಡೆಯಿತು.
ರಕ್ತದಾನ ಶಿಬಿರದ ಸಭಾವೇದಿಕೆಯಲ್ಲಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಪೆರುವಾಯಿ ಕೊಲ್ಲತ್ತಡ್ಕ ಇದರ ಮುಖ್ಯ ಶಿಕ್ಷಕ ಹಾಗೂ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶ್ರೀ ಕುಂಞಿ ನಾಯ್ಕ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಪೆರುವಾಯಿ ಇದರ ಶುಶ್ರೂಷ ಅಧಿಕಾರಿಯಾದ ಶ್ರೀಮತಿ ಚಂದ್ರಪ್ರಭಾ ಇವರನ್ನು ಸನ್ಮಾನಿಸಲಾಯಿತು.
ಸಭಾ ವೇದಿಕೆಯಲ್ಲಿ ಸಂಘಟನೆಯ ಸೇವಾ ಚಟುವಟಿಕೆಯ ಬಗ್ಗೆ ವಿನೋದ್ ಶೆಟ್ಟಿ ಅಡ್ಕಸ್ಥಳ ಇವರು ಮಾತನಾಡಿದರು. ಎ ಜೆ ಶೆಟ್ಟಿ ರಕ್ತನಿಧಿ ಇದರ ವ್ಯವಸ್ಥಾಪಕ ಗೋಪಾಲಕೃಷ್ಣ ಇವರು ರಕ್ತದಾನ ಶಿಬಿರದ ಬಗ್ಗೆ ಮಾಹಿತಿ ನೀಡಿದರು. ಸನ್ಮಾನ ಸ್ವೀಕರಿಸಿದ ಶಾಲಾ ಮುಖ್ಯ ಶಿಕ್ಷಕ ಶ್ರೀ ಕುಂಞಿ ನಾಯ್ಕ ಹಾಗೂ ಆರೋಗ್ಯ ಕೇಂದ್ರದ ಶುಶ್ರೂಷ ಅಧಿಕಾರಿ ಶ್ರೀಮತಿ ಚಂದ್ರಪ್ರಭಾ ಇವರು ಮಾತನಾಡಿ ಸಂಘಟನಾ ಸೇವಾ ಚಟುವಟಿಕೆಗೆ ಶುಭಹಾರೈಸಿದರು.
ಸಭಾ ವೇದಿಕೆಯಲ್ಲಿ ಬಜರಂಗದಳ ಪುತ್ತೂರು ಜಿಲ್ಲಾ ಸಹ ಸಂಚಾಲಕ ಭರತ್ ಕುಮ್ಡೇಲು, ಶ್ರೀ ರಾಜರಾಜೇಶ್ವರಿ ಭಜನಾ ಮಂದಿರದ ಅಧ್ಯಕ್ಷ ಶ್ರೀ ಪ್ರಕಾಶ್ಚಂದ್ರ ಶೆಟ್ಟಿ ಪೆರುವಾಯಿ , ವಿಶ್ವ ಹಿಂದೂ ಪರಿಷತ್ ಪೆರುವಾಯಿ ಘಟಕದ ಅಧ್ಯಕ್ಷ ಶೇಖರ ಪೂಜಾರಿ ಕುಂಬಳಕೋಡಿ ಉಪಸ್ಥಿತರಿದ್ದರು.
ಮಾತೃ ಶಕ್ತಿ ಅಧ್ಯಕ್ಷರಾದ ತುಳಸಿ ಮಂಜುನಾಥ ಆಚಾರ್ಯ, ಸವಿತಾ ಮುರಳೀಧರ ಆಚಾರ್ಯ ರವರು ಪ್ರಾರ್ಥಿಸಿ, ಬಜರಂಗದಳ ಪೆರುವಾಯಿ ಘಟಕದ ಸಂಚಾಲಕ ಮೋಕ್ಷಿತ್ ಪೆರುವಾಯಿ ಸ್ವಾಗತಿಸಿ, ವಿಶ್ವ ಹಿಂದೂ ಪರಿಷತ್ ಬಜರಂಗದಳ ಘಟಕದ ಗೌರವಾಧ್ಯಕ್ಷ ಮಂಜುನಾಥ ಆಚಾರ್ಯ ಅಶ್ವಥನಗರ ವಂದಿಸಿದರು, ಸನ್ಮಾನ ಪತ್ರವನ್ನು ಯತೀಶ್ ಪೆರುವಾಯಿ ವಾಚಿಸಿದರು, ಕಾರ್ಯಕ್ರಮದ ನಿರೂಪಣೆಯನ್ನು ಮಾಸ್ತರ್ ನಾಗೇಶ್ ಪಾಟಾಳಿ ಕೊಲ್ಲತ್ತಡ್ಕ ಇವರು ಮಾಡಿದರು. 102 ಜನರು ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ರಕ್ತದಾನ ಮಾಡಿದರು.