Sunday, August 9, 2026
spot_imgspot_img
spot_imgspot_img

ದೆಹಲಿ ವಿಧಾನಸಭೆ ಒಡಲಿನಲ್ಲಿ ‘ರಹಸ್ಯ ಸುರಂಗ’; 75 ವರ್ಷಗಳ ನಿಗೂಢ ಗುಹೆಯ ಹಿಂದಿದೆ ರೋಚಕ ಕಥೆ

- Advertisement -
- Advertisement -

ದೆಹಲಿ ವಿಧಾನಸಭೆಯೊಳಗಡೆ ಗುಪ್ತ ಸುರಂಗ ಮಾರ್ಗವೊಂದು ಪತ್ತೆಯಾಗಿದೆ. ಬ್ರಿಟಿಷರು ಕಾಲದಿಂದಲೂ ಇದ್ದ ಸುರಂಗ ಮಾರ್ಗದ ಪ್ರವೇಶ ದ್ವಾರ ಇದೀಗ ದೆಹಲಿಯ ವಿಧಾಸಭೆಯೊಳಗಡೆ ಕಂಡು ಬರುವ ಮೂಲಕ ಎಲ್ಲರ ಅಚ್ಚರಿಗೆ ಕಾರಣವಾಗಿದೆ.

ಅದು ಸಾವಿರಾರು ರಾಜಕಾರಣಿಗಳು ಓಡಾಡಿರುವ ಜಾಗ. ಹತ್ತಾರು ಮುಖ್ಯಮಂತ್ರಿಗಳು, ನೂರಾರು ಶಾಸಕರು, ಸಚಿವರು ಎಲ್ಲರೂ ಅಲ್ಲಿ ಓಡಾಡಿದ್ರು. ಹಲವು ದಶಕಗಳಿಂದ ರಾಜಕಾರಣಿಗಳು ಅಲ್ಲಿ ಓಡಾಡಿದ್ರೂ, ಯಾರೆಂದರೆ ಯಾರೊಬ್ಬರಿಗೂ, ಆ ನಾಲ್ಕು ಗೋಡೆಗಳ ಅಡಿಯಲ್ಲಿ ಬ್ರಿಟಿಷರ ಕಾಲದ ರಹಸ್ಯವಾದ ಟನಲ್ ಒಂದಿದೆ ಅನ್ನೋ ಮ್ಯಾಟರ್ ಗೊತ್ತಾಗಿರಲಿಲ್ಲ. ಇಷ್ಟು ದಿನ ಭೂಮಿಯಡಿಯಲ್ಲಿ ಮರೆಯಾಗಿದ್ದ ರಹಸ್ಯವೊಂದು ಕೊನೆಗೂ ಬೆಳಕಿಗೆ ಬಂದಿದೆ.

ರಹಸ್ಯ ಬಚ್ಚಿಟ್ಟುಕೊಂಡಿದ್ದ ದೆಹಲಿ ವಿಧಾನಸಭೆ
ದೆಹಲಿ ವಿಧಾನಸಭೆಯು ತನ್ನ ಒಡಲಲ್ಲಿ ಇಂತಹದ್ದೊಂದು ರಹಸ್ಯ ಬಚ್ಚಿಟ್ಟುಕೊಂಡಿದೆ ಅನ್ನೋ ಸತ್ಯ ಹೊರ ಜಗತ್ತಿಗೆ ಗೊತ್ತಾಗಲು ಹಲವು ದಶಕಗಳೇ ಬೇಕಾಯಿತು. ನೂರಾರು ರಾಜಕಾರಣಿಗಳು, ಹತ್ತಾರು ಮಂತ್ರಿಗಳು, ಮುಖ್ಯಮಂತ್ರಿಯಿಂದ ಹಿಡಿದು ಸಿಬ್ಬಂದಿಗಳವರೆಗೂ ಇಲ್ಲೇ ಓಡಾಡಿದ್ರೂ, ಯಾರೊಬ್ಬರಿಗೂ ಈ ಸುರಂಗದ ಬಗ್ಗೆ ಕಿಂಚಿತ್ತು ಗೊತ್ತಾಗ್ಲಿಲ್ಲ. ಇಷ್ಟು ವರ್ಷಗಳ ಕಾಲ ನೆಲದಡಿಯಲ್ಲಿ ಅಡಗಿದ್ದ ರಹಸ್ಯ ಕಡೆಗೂ ಬಹಿರಂಗಗೊಂಡಿದೆ. ಆ ಮೂಲಕ ಎಲ್ಲರನ್ನೂ ಅಚ್ಚರಿ ಪಡುವಂತೆ ಮಾಡಿದೆ.

ದಿಲ್ಲಿಯ ವಿಧಾನಸಭೆಯಿಂದ ಕೆಂಪುಕೋಟೆಗೆ ಸಂಪರ್ಕಿಸುತ್ತಿದ್ದ ಈ ಸುರಂಗ ಮಾರ್ಗವನ್ನ ಅಂದು ಬ್ರಿಟಿಷರು ಸ್ವಾತಂತ್ರ್ಯ ಹೋರಾಟಗಾರರನ್ನ ಸಾಗಿಸಲು ಬಳಸುತ್ತಿದ್ದರು. ಒಂದು ವೇಳೆ ಬ್ರಿಟಿಷರು ತಮ್ಮ ಬಂಧನದಲ್ಲಿ ಇಟ್ಟುಕೊಂಡಿದ್ದ ಭಾರತೀಯ ಸ್ವಾತಂತ್ರ್ಯ ಹೋರಾಟಗಾರರನ್ನ ರಸ್ತೆಯ ಮೂಲಕ ಕೋರ್ಟ್​ಗೆ ಕರ್ಕೊಂಡು ಹೋಗ್ತಿದ್ರೆ, ಬ್ರಿಟಿಷರ ಮೇಲೆ ಇತರೆ ಭಾರತೀಯ ಸ್ವಾತಂತ್ರ್ಯ ಹೋರಾಟಗಾರರು ದಾಳಿ ಮಾಡುವ ಸಾಧ್ಯತೆ ಇತ್ತು. ಈ ವಿಷ್ಯವನ್ನ ಮೊದಲೇ ಅರಿತಿದ್ದ ಬ್ರಿಟಿಷರು ಪ್ರತೀಕಾರದ ದಾಳಿಗಳನ್ನು ತಪ್ಪಿಸುವ ಸಲುವಾಗಿ, ಇದೇ ಗುಪ್ತ ಸುರಂಗ ಮಾರ್ಗಗಳ ಮೂಲಕ ಸ್ವಾತಂತ್ರ್ಯ ಹೋರಾಟಗಾರರನ್ನ ಕೋರ್ಟ್​​ಗೆ ಕರ್ಕೊಂಡು ಹೋಗ್ತಿದ್ರು.

ಗುಪ್ತ ಸುರಂಗ ಮಾರ್ಗದ ಹಿನ್ನೆಲೆ
1912ರಲ್ಲಿ ಬ್ರಿಟಿಷರು ಕೊಲ್ಕತ್ತಾದಿಂದ ಕೇಂದ್ರ ಶಾಸಕಾಂಗ ಕಚೇರಿಯನ್ನ ಭಾರತದ ಹೃದಯಭಾಗ ದೆಹಲಿಗೆ ಸ್ಥಳಾಂತರ ಮಾಡಿದ್ರು. ಇದಾಗಿ 14 ವರ್ಷಗಳ ನಂತರ ಅಂದ್ರೆ 1926ರಲ್ಲಿ ಈ ಕೇಂದ್ರ ಶಾಸಕಾಂಗ ಕಚೇರಿಯನ್ನ ಬ್ರಿಟಿಷರು ಕೋರ್ಟ್​ ಆಗಿ ಪರಿವರ್ತನೆ ಮಾಡಿದ್ರು. ಯಾವಾಗ ಇದು ಕೋರ್ಟ್​​ ಆಗಿ ಕನ್ವರ್ಟ್​ ಆಯ್ತೋ, ಈ ವೇಳೆ ಬ್ರಿಟಿಷರು ತಮ್ಮ ಬಂಧನದಲ್ಲಿದ್ದ ಭಾರತೀಯ ಸ್ವಾತಂತ್ರ್ಯ ಹೋರಾಟಗಾರರನ್ನ ಇದೇ ಗುಪ್ತ ಸುರಂಗ ಮಾರ್ಗವಾಗಿ ಕೋರ್ಟ್​ಗೆ​ ಹಾಜರುಪಡಿಸುತ್ತಿದ್ರು. ಆದ್ರೆ ಬ್ರಿಟಿಷರು ಅಂದು ನಿರ್ಮಿಸಿದ್ದ ಸುರಂಗ ಮಾರ್ಗದ ಪ್ರವೇಶದ್ವಾರ, ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷಗಳ ನಂತರ ದೆಹಲಿ ವಿಧಾನಭೆಯೊಳಗೆ ಪತ್ತೆಯಾಗಿದೆ.

ಸುರಂಗ ಪತ್ತೆಯಾದ್ರೂ ಅದನ್ನು ಅಗೆಯಲು ಸಾಧ್ಯವಿಲ್ಲ
ಸುರಂಗ ಮಾರ್ಗದೊಳಗೆ ಹೋಗುವ ದಾರಿ ದೆಹಲಿ ವಿಧಾನಸಭೆಯೊಳಗೆ ಪತ್ತೆಯಾಗಿದ್ರೂ, ಆ ಸುರಂಗ ಮಾರ್ಗವನ್ನ ಅಗೆಯಲು ಸಾಧ್ಯವಿಲ್ಲ. ಯಾಕಂದ್ರೆ ರಾಷ್ಟ್ರ ರಾಜಧಾನಿ ದೆಹಲಿಯು ಹಿಂದಿನಂತಿಲ್ಲ. ಗಗನಚುಂಬಿಸುವ ಕಟ್ಟಡಗಳು, ಮಿಂಚಿನ ವೇಗದಲ್ಲಿ ಸಾಗುವ ಮೈಟ್ರೋಗಳು ಸೇರಿದಂತೆ ಅಭಿವೃದ್ಧಿಯ ಪ್ರತಿಬಿಂಬಗಳನ್ನ ಸೂಸುವ ಹಲವು ಕಂಪನಿಗಳು ಕೂಡ ದೆಹಲಿಯ ಬಾಗಿಲು ಬಂದು ಸೇರಿದೆ. ದೆಹಲಿ ಮೆಟ್ರೋ ಸಿಟಿ ಕೂಡ. ಇದೇ ಮೆಟ್ರೋ ಕಾಮಗಾರಿಯ ಸಮಯದಲ್ಲಿ ಒಳಚರಂಡಿ ಕಾಮಗಾರಿಗಳ ವೇಳೆ ಸುರಂಗದ ಮಾರ್ಗಗಳು ನಾಶವಾಗಿದೆ. ಒಂದು ವೇಳೆ ಮತ್ತೆ ಸುರಂಗ ಮಾರ್ಗವನ್ನ ಅಗೆಯಲು ಮುಂದಾದ್ರೆ, ಮೆಟ್ರೋ ಕಾಮಗಾರಿಗೆ ತೊಂದ್ರೆಯಾಗುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಪ್ರವೇಶ ದ್ವಾರ ದೊರಕಿದ್ರೂ ಅದನ್ನ ಅಗೆಯಲು ಸಾಧ್ಯವಿಲ್ಲವೆಂದು ದೆಹಲಿ ವಿಧಾನಸಭಾ ಸ್ಪೀಕರ್ ರಾಮ್ ನಿವಾಸ್ ಗೋಯೆಲ್​ ಹೇಳಿದ್ದಾರೆ.

ನಮಗೆ ಈಗ ಸುರಂಗದ ಪ್ರವೇಶ ದ್ವಾರ ದೊರಕಿದೆ. ಆದರೆ ಅದನ್ನು ಇನ್ನಷ್ಟು ಮುಂದೆ ಅಗೆಯುತ್ತಾ ಹೋಗುವುದಿಲ್ಲ. ಸುರಂಗದ ಎಲ್ಲ ಮಾರ್ಗಗಳೂ ಈಗಾಗಲೇ ಮೆಟ್ರೋ ಯೋಜನೆಗಳು ಹಾಗೂ ಒಳಚರಂಡಿ ಯೋಜನೆಗಳಿಂದಾಗಿ ನಾಶವಾಗಿವೆ’

ದಶಕಗಳ ಕಾಲ ಮರೆಯಾಗಿದ್ದ ಸುರಂಗ ಈಗ ಪತ್ತೆಯಾಗಿದ್ದೇಗೆ?

ದೆಹಲಿ ವಿಧಾನಸಭಾ ಸ್ಪೀಕರ್ ರಾಮ್ ನಿವಾಸ್ ಗೋಯೆಲ್​ 1993 ರಲ್ಲೇ ರಾಜಕೀಯ ವಲಯದಲ್ಲಿ ಗುರುತಿಸಿಕೊಂಡಿದ್ರು. ಇದೇ ವೇಳೆ ಅಂದ್ರೆ 1993 ರಲ್ಲೇ ಅದ್ಯಾರೋ, ಬ್ರಿಟಿಷರು ತೋಡಿದ್ದ ಸುರಂಗ ಮಾರ್ಗದ ಬಗ್ಗೆ ಇವರ ಬಳಿ ಹೇಳಿದ್ರು. ಅಲ್ಲದೆ ಬ್ರಿಟಿಷರು ತೋಡಿರುವ ಸುರಂಗ ಮಾರ್ಗದ ಪ್ರವೇಶ ದ್ವಾರ ಪರ್ಟಿಕ್ಯುಲರ್ ಆಗಿ ಎಲ್ಲಿದೆ ಅನ್ನೋದು ಸ್ವತಃ ರಾಮ್ ನಿವಾಸ್ ಗೋಯೆಲ್​ಗೂ ಗೊತ್ತಿರ್ಲಿಲ್ಲ.

ಆದ್ರೆ ಇದೀಗ ಆ ಸತ್ಯ ಗೊತ್ತಾಗಿದ್ದೇ ಒಂದು ರೋಚಕ. ದೇಶವು 75ರ ಸ್ವಾತಂತ್ರ್ಯ ಸಂಭ್ರಮದಲ್ಲಿದೆ. ಇಂತಹ ಹೊತ್ತಲ್ಲಿ, ಭಾರತೀಯ ಸ್ವಾತಂತ್ರ್ಯ ಹೋರಾಟಗಾರುನ್ನ ಕೋರ್ಟ್​ಗೆ ಕರೆತರಲು ಬಳಸುತ್ತಿದ್ದ ಆ ಸುರಂಗ ಮಾರ್ಗ ಎಲ್ಲಿದೆ ಎಂಬ ಕುತೂಹಲ ರಾಮ್ ನಿವಾಸ್ ಗೋಯೆಲ್​ಗೂ ಮೂಡಿತ್ತು. ಈ ಸಂಬಂಧ ಆ ಜಾಗವನ್ನ ಪರಿಶೀಲನೆ ಮಾಡುವಂತೆ ಸಿಬ್ಬಂದಿಗೆ ಹೇಳಿದ್ದಾರೆ. ಇದೀಗ ಆ ಜಾಗ ಪತ್ತೆಯಾಗಿದ್ದೆ. ದೆಹಲಿ ವಿಧಾನಸಭೆಯ ಒಳಗಡೆನೇ ಆ ಜಾಗ ಪತ್ತೆಯಾಗಿದ್ದು ಸ್ವತಃ ರಾಮ್ ನಿವಾಸ್ ಗೋಯೆಲ್ ಕೂಡ ಅಚ್ಚರಿಗೊಂಡಿದ್ದಾರೆ.

ನಾನು 1993ರಲ್ಲಿ ಶಾಸಕನಾಗಿದ್ದಾಗ ಇಲ್ಲಿ ಸುರಂಗವೊಂದಿದ್ದು, ಅದು ಕೆಂಪುಕೋಟೆ ಜತೆ ಸಂಪರ್ಕ ಸಾಧಿಸುತ್ತದೆ ಎಂಬ ಮಾತುಗಳನ್ನು ಕೇಳಿದ್ದೆ. ಈಗ ದೇಶವು 75ನೇ ಸ್ವಾತಂತ್ರ್ಯೋತ್ಸವ ಆಚರಿಸಿಕೊಳ್ಳುತ್ತಿದೆ. ಹೀಗಾಗಿ ನಾನು ಆ ಕೊಠಡಿಯನ್ನು ಪರಿಶೀಲಿಸಲು ಹೇಳಿದ್ದೆ. ಇದೀಗ ಆ ಜಾಗ ಪತ್ತೆಯಾಗಿದೆ.

ರಾಮ್ ನಿವಾಸ್ ಗೋಯೆಲ್, ದೆಹಲಿ ವಿಧಾನಸಭಾ ಸ್ಪೀಕರ್
ಆಗ ಸ್ವಾತಂತ್ರ್ಯ ಹೋರಾಟಗಾರರನ್ನು ಕೆಂಪುಕೋಟೆಯಿಂದ ಸುರಂಗ ಮಾರ್ಗದ ಮೂಲಕ ನೇರವಾಗಿ ಕೋರ್ಟ್​​ಗೆ ತರಲಾಗುತಿತ್ತು. ಇದೇ ಸುರಂಗ ಮಾರ್ಗದ ಮೂಲಕವೇ ಕರೆತರಲಾಗಿತ್ತು. ಒಟ್ಟಿನಲ್ಲಿ ಇಷ್ಟು ದಿನಗಳ ನೂರಾರು ರಾಜಕಾರಣಿಗಳು ಆ ಸುರಂಗ ಮಾರ್ಗ ಪ್ರವೇಶ ದ್ವಾರದ ಮೇಲ್ಭಾಗವನ್ನ ತುಳಿದು ಸಾಗಿದ್ರೂ ಕೂಡ ಯಾರೊಬ್ಬರಿಗೂ ಕೂಡ, ನಾವು ತುಳಿಯುತ್ತಿರುವುದು ಬರೀ ನೆಲವನ್ನಲ್ಲ, ಬದಲಾಗಿ ಬ್ರಿಟಿಷರ ಸುರಂಗದ ದ್ವಾರವನ್ನ ಅನ್ನೋ ಸಣ್ಣ ಅರಿವು ಕೂಡ ಇರ್ಲಿಲ್ಲ. ಇದೀಗ ಸುರಂಗ ಪತ್ತೆಯಾಗಿದ್ದ ಬಳಿಕ ಎಲ್ಲಾ ರಾಜಕಾರಣಿಗಳು ಅಚ್ಚರಿಗೊಂಡಿದ್ದಾರೆ.

ಸ್ವಾತಂತ್ರ್ಯ ಪೂರ್ವದ ಸಂದರ್ಭದಲ್ಲಿ ಬ್ರಿಟಿಷರು ಸುರಂಗ ಮಾರ್ಗಗಳ ಮೂಲಕವೇ ರಹಸ್ಯವಾಗಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಪ್ರಯಾಣ ಮಾಡ್ತಿದ್ರು. ಈ ಸಂದರ್ಭದಲ್ಲಿ ಹಲವು ಸುರಂಗ ಮಾರ್ಗಗಳು ಪತ್ತೆಯಾಗಿದ್ವು. ಬ್ರಿಟಿಷರು ಕೊರೆದಿರುವ ಸುರಂಗಗಳು ದೇಶದ ಇನ್ಯಾವ ಮೂಲೆಯಲ್ಲಿ ಜನರ ಕಣ್ಣಿಗೆ ಬೀಳದೆ ಬಾಕಿ ಇದ್ಯೋ ಎಂಬ ಕುತೂಹಲ ಕೂಡ ಈಗ ಎಲ್ಲರನ್ನ ಕಾಡ್ತಿದೆ.

ಇಷ್ಟು ದಿನಗಳ ಕಾಲ ಮರೆಯಲ್ಲಿ ಮರೆಯಾಗಿದ್ದ ಬ್ರಿಟಿಷರ ನಿರ್ಮಿಸಿದ ಸುರಂಗ ಕಡೆಗೂ ಪತ್ತೆಯಾಗಿದೆ. ದೇಶದ ಅದ್ಯಾವ ಮೂಲೆಯಲ್ಲಿ ಇನ್ಯಾವ ಪಳಿಯುಳಿಕೆಗಳು ಬಾಕಿಯಾಗಿದ್ಯೋ ಗೊತ್ತಿಲ್ಲ. ಮುಂದೊಂದು ದಿನ ಬೇರೆ ಎಲ್ಲಾದ್ರೂ ಕೂಡ ಇದೇ ತರಹದ ಮತ್ತೊಂದು ಸುರಂಗ ಪತ್ತೆಯಾದ್ರು ಅಚ್ಚರಿ ಇಲ್ಲ..

driving
- Advertisement -

Related news

error: Content is protected !!