ಮಂಗಳೂರು: ಭಾನುವಾರ ಬೆಳಗ್ಗೆ ನಂಬರ್ ಪ್ಲೇಟ್ ಇಲ್ಲದ ರಿಡ್ಜ್ ಕಾರಿನಲ್ಲಿ ಬಂದ ಅಪರಿಚಿತ ದುಷ್ಕರ್ಮಿಗಳು ಅಪ್ಪರ್ ಬೆಂದೂರ್ವೇಲ್ ನಲ್ಲಿರುವ ಸೈಂಟ್ ಆಗ್ನೇಸ್ ಕಾಲೇಜಿನ ಗೇಟಿನ ಮುಂಭಾಗ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬಳ ಬ್ಯಾಗನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದ ಘಟನೆ ನಡೆದಿದೆ.
ಬ್ಯಾಗನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದಾಗ ಮಹಿಳೆ ಪ್ರತಿರೋಧ ಒಡ್ಡಿದ್ದು, ಅಲ್ಲಿದ್ದ ಸಾರ್ವಜನಿಕರು ದುಷ್ಕರ್ಮಿಗಳನ್ನು ಹಿಡಿಯುವ ಪ್ರಯತ್ನ ಮಾಡಿದಾಗ ಅವರುಗಳು ಅಲ್ಲಿಂದ ತಪ್ಪಿಸಿಕೊಂಡು ಅದೇ ಕಾರಿನಲ್ಲಿ ಪರಾರಿಯಾಗಿದ್ದು, ಈ ಘಟನೆ ಸ್ಥಳೀಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಈ ಬಗ್ಗೆ ಪೊಲೀಸರ ಬಳಿ ವಿಚಾರಣೆ ನಡೆಸುತ್ತಿದ್ದಂತೆ ನಿಜಾಂಶ ಬಯಲಾಗಿದೆ. ಈ ಕುರಿತು ಸ್ವತ: ಮಂಗಳೂರು ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಸ್ಪಷ್ಟನೆ ನೀಡಿದ್ದಾರೆ ಇದೊಂದು ಪೂರ್ವ ನಿಯೋಜಿತ ಅಣುಕು ಪ್ರದರ್ಶನವಾಗಿದೆ. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಇದನ್ನು ಸೃಷ್ಟಿಸಲಾಗಿದೆ ಎಂದಿದ್ದಾರೆ.
ಅಷ್ಟಕ್ಕೂ ನಡೆದಿದ್ದೇನು?
ಹಾಡಹಗಲೇ ದುಷ್ಕರ್ಮಿಗಳು ಈ ರೀತಿ ಮಹಿಳೆಯ ಸರ ಕಿತ್ತು ಓಡಿದ ಸಿಸಿಟಿವಿ ದೃಶ್ಯ ಪೊಲೀಸ್ ಗ್ರೂಪ್ ನಲ್ಲಿ ಬರುತ್ತಿದ್ದಂತೆ ಮಾಧ್ಯಮದ ವ್ಯಕ್ತಿಗಳು ನೋಡಿ ಹೌಹಾರಿದ್ದರು. ಕೊನೆಗೆ ಈ ಬಗ್ಗೆ ಮಾಹಿತಿ ಕೇಳಿದಾಗ, ಒಟ್ಟು ಘಟನೆ ಪೊಲೀಸರ ಕಡೆಯಿಂದಲೇ ಸಾರ್ವಜನಿಕರ ಎಚ್ಚರಿಕೆ ಸಲುವಾಗಿ ನಡೆಯುತ್ತಿರುವ ಅಣಕು ಕಾರ್ಯಾಚರಣೆ ಎನ್ನುವುದು ತಿಳಿದುಬಂದಿದೆ. ಕಳೆದ ಒಂದು ವಾರದಲ್ಲಿ ಮಂಗಳೂರಿನ ಉರ್ವಾ ಮತ್ತು ಕದ್ರಿ ಠಾಣೆ ವ್ಯಾಪ್ತಿಯಲ್ಲಿ ಸರಣಿಯಂತೆ ಸರಗಳ್ಳತನ ನಡೆದಿತ್ತು. ಈ ಮೂಲಕ ಒಬ್ಬಂಟಿ ಮಹಿಳೆಯರು ಬಂಗಾರ ಧರಿಸಿ ಹೋಗುವಾಗ ಜಾಗ್ರತೆ ವಹಿಸಬೇಕು ಎಂದು ಪೊಲೀಸ್ ಆಯುಕ್ತರು ಸೂಚಿಸಿದ್ದಾರೆ.