ವಿಟ್ಲ : ನೆಟ್ಲಮುಡ್ನೂರು ಗ್ರಾಮದ ಏಮಾಜೆಯಲ್ಲಿ ಮಹಿಳೆ ಮತ್ತು ಮಕ್ಕಳು ಮಾತ್ರ ಮನೆಯಲ್ಲಿದ್ದ ಸಂದರ್ಭ ಆರು ಜನರ ತಂಡ ಅಕ್ರಮ ಪ್ರವೇಶ ಮಾಡಿ ಜೀವಬೆದರಿಕೆ ಹಾಕಿ, ಅದೇ ರಾತ್ರಿ ಮನೆಗೆ ನುಗ್ಗಿದ ತಂಡ ವಾಮಾಚಾರ ನಡೆಸಿ ಸೊತ್ತುಗಳನ್ನು ಕಳವುಗೈದು ಕುಡಿಯುವ ನೀರಿಗೆ ವಿಷ ಹಾಕಿ ಮನೆಯ ಬಾಗಿಲು ಮುರಿದು ಸರಕಾರಿ ಬಾವಿಗೆ ಎಸೆದಿರುವ ಘಟನೆ ನೆಟ್ಲಮುಡ್ನೂರು ಗ್ರಾಮದ ಏಮಾಜೆಯಲ್ಲಿ ನಡೆದಿದೆ.
ಈ ಬಗ್ಗೆ ಜೀವಭಯದಿಂದ ತತ್ತರಿಸಿದ ಮನೆ ಮಾಲಕಿ ಯಾದವ ಸಾಲ್ಯಾನ್ ಪತ್ನಿ ಸುಜಾತ, ವಿಟ್ಲ ಪೊಲೀಸರಿಗೆ ದೂರು ನೀಡಿ ರಕ್ಷಣೆ ಬೇಡಿದ್ದಾರೆ. ನೆಟ್ಲ ಮುಡ್ನೂರು ಗ್ರಾಮದ ಏಮಾಜೆ ನಿವಾಸಿ ರಾಮ ನಲಿಕೆ ಪುತ್ರ ಚಂದ್ರಹಾಸ, ಮೋನಪ್ಪ ನಲಿಕೆಯವರ ಪುತ್ರರಾದ ಪ್ರವೀಣ, ಪ್ರಸಾದ್ ಮತ್ತು ನಂದಕಿಶೋರ್, ಕಿಟ್ಟು ನಲಿಕೆ ಪುತ್ರ ಪದ್ಮನಾಭ ಮತ್ತು ವಾಸು ನಲಿಕೆ ಪುತ್ರ ಲೋಕೇಶ್ ವಿರುದ್ಧ ಸುಜಾತ ದೂರು ನೀಡಿದ್ದಾರೆ.
ತನ್ನ ಪತಿ ಯಾದವ ಸಾಲ್ಯಾನ್ ಕೆಲಸದ ನಿಮಿತ್ತ ಹೊರಗಡೆ ಹೋಗಿದ್ದ ಸಂದರ್ಭ ಸಂಜೆ ಹೊತ್ತಲ್ಲಿ ಮನೆಗೆ ಅಕ್ರಮ ಪ್ರವೆಶ ಮಾಡಿದ ಆರೋಪಿಗಳು ನನಗೆ ಮತ್ತು ಪುಟ್ಟ ಮಕ್ಕಳಿಗೆ ಮನೆ ಖಾಲಿ ಮಾಡುವಂತೆ ಬೆದರಿಕೆ ಹಾಕಿದ್ದಾರೆ. ಇದರಿಂದ ಕಂಗಾಲಾದ ನಾನು ಮತ್ತು ಮಕ್ಕಳು ಪತಿಯ ತಂದೆ(ಮಾವ) ಡೊಂಬಯ್ಯ ಪಂಡಿತರ ಮನೆಗೆ ಹೋಗಿ ಆಶ್ರಯ ಪಡೆದಿದ್ದು ರಾತ್ರಿ ಪತಿ ಬಂದ ಬಳಿಕ ವಿಚಾರ ತಿಳಿಸಿ ಅಲ್ಲೇ ಮಲಗಿದ್ದೆವು. ಮರುದಿನ ತಮ್ಮ ಮನೆಗೆ ಬಂದಾಗ ಆರೋಪಿಗಳು ಮನೆಯ ಬಾಗಿಲು ಮುರಿದು ವಾಮಾಚಾರ ನಡೆಸಿದ್ದಲ್ಲದೇ ಕುಡಿಯುವ ನೀರಿಗೆ ವಿಷ ಹಾಕಿ ಸೊತ್ತುಗಳನ್ನು ಹೊತೊಯ್ದಿದ್ದಾರೆಂದು ಸುಜಾತ ದೂರಿನಲ್ಲಿ ವಿವರಿಸಿದ್ದಾರೆ.
ಅಲ್ಲದೇ ಮನೆಯ ಬಾಗಿಲನ್ನು ಅಲ್ಲೇ ಪಕ್ಕದ ಸರಕಾರಿ ಬಾವಿಗೆ ಎಸೆದು ಹೋಗಿದ್ದು ನಾನು ದೂರು ನೀಡಿದ ಬಳಿಕ ಸ್ಥಳಕ್ಕಾಗಮಿಸಿದ ಪೊಲೀಸರು ಆರೋಪಿಗಳು ಎಸಗಿದ್ದ ದುಷ್ಕೃತ್ಯವನ್ನು ಗಮನಿಸಿ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.