ಕಡಬ: ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಅಜ್ಜಿ ಮತ್ತು ಮೊಮ್ಮಗಳಿಗೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಘಟನೆ ಕೋಡಿಂಬಾಳದ ಬಳ್ಳಿಕಜೆ ಎಂಬಲ್ಲಿ ನಡೆದಿದ್ದು, ನ್ಯಾಯ ದೊರಕಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾ ವರಿಷ್ಠಾಧಿಕಾರಿಗೆ ಯುವತಿ ದೂರು ನೀಡಿದ್ದಾರೆ.
ತುಳುನಾಡು ರಕ್ಷಣಾ ವೇದಿಕೆಯ ಮೂಲಕ ದೂರು ನೀಡಿದ್ದು ಸಂತ್ರಸ್ತ ಯುವತಿಯ ಮಾವ, ಅತ್ತೆ ಹಾಗೂ ಮಗನ ವಿರುದ್ಧ ಆರೋಪ ಮಾಡಲಾಗಿದೆ. ಅಲ್ಲದೆ ಅಜ್ಜಿ ಮತ್ತು ಮೊಮ್ಮಗಳಿಗೆ ಜಾಗದ ವಿಚಾರಕ್ಕೆ ಸಂಬಂಧಿಸಿ ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ.
ಯುವತಿಯ ಅಜ್ಜಿಗೆ 2 ಎಕರೆ 70 ಸೆಂಟ್ಸ್ ಜಾಗ ಇದ್ದು, ಈ ಆಸ್ತಿಯನ್ನು ನನ್ನ ಮೂವರು ಮಾವಂದಿರಿಗೆ ಹಾಗೂ ಮೊಮ್ಮಗಳಿಗೂ ಪಾಲು ಮಾಡಿರುತ್ತಾರೆ. ಮೊಮ್ಮಗಳ ಪಾಲಿನ ಜಾಗ ಅಜ್ಜಿಯ ಹೆಸರಿನಲ್ಲಿರುತ್ತದೆ. ಜಮೀನಲ್ಲಿ ಮೊಮ್ಮಗಳಿಗೆ ಪಾಲು ಕೊಟ್ಟಿರುವುದಕ್ಕೆ ಮಾವ ಜಾನ್, ಅತ್ತೆ ಜೆನ್ಸಿಯವರು ತಕರಾರು ಮಾಡಿರುತ್ತಾರೆ. ಅಲ್ಲದೇ ಅಜ್ಜಿಯವರ ಕುತ್ತಿಗೆಯನ್ನು ಹಿಡಿದು ಹಲ್ಲೆ ಮಾಡಿರುತ್ತಾರೆ
ಕಳೆದ ಜ. 2ರಂದು ಮಧ್ಯಾಹ್ನ ಕಡಬ ತಾಲೂಕು ಕೋಡಿಂಬಾಳ ಚರ್ಚ್ನಿಂದ ಯುವತಿ ಪ್ರಾರ್ಥನೆ ಮುಗಿಸಿ ಹೊರಗಡೆ ಬಂದಾಗ ಮಾವ ಜಾನ್, ಅತ್ತೆ ಜೆನ್ಸಿ ಹಾಗೂ ಅವರ ಮಗ ಸ್ಲೇವಿನ್ ಅಡ್ಡಗಟ್ಟಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಜೀವ ಬೆದರಿಕೆಯನ್ನು ಹಾಕಿರುತ್ತಾರೆ ಅಲ್ಲದೇ ಇವರುಗಳು ನನಗೆ ಊರಿನಲ್ಲಿ ತೇಜೋವಧೆ ಮಾಡುತ್ತಿರುವುದರಿಂದ ಮಾನಸಿಕವಾಗಿ ಕುಗ್ಗಿರುತ್ತೇನೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಹಿಂದೆ ಘಟನೆಗೆ ಸಂಬಂಧಿಸಿ ಯುವತಿ ಕಡಬ ಠಾಣೆಯಲ್ಲಿ ದೂರು ನೀಡಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ದಿನಾಂಕ 02-01-2022 ರಂದು ಯುವತಿ ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಎಫ್ಐಆರ್ ದಾಖಲಾಗಿರುತ್ತದೆ. ಆದರೆ ಈ ಸಂಬಂಧ ಪುತ್ತೂರು ಮಹಿಳಾ ಠಾಣೆ ಪೊಲೀಸರ ಮೌನ ಹಲವಾರು ಸಂಶಯಗಳಿಗೆ ಕಾರಣವಾಗಿದೆ.