ಪುತ್ತೂರು: ಲೀಸಿಗೆ ಪಡೆದ ತೋಟದಲ್ಲಿ ಕೆಲಸ ಮಾಡಿಸುತ್ತಿದ್ದ ಯುವತಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ ಪ್ರಕರಣದ ಬಗ್ಗೆ ಪುತ್ತೂರು ತಾಲೂಕಿನ ಮುಕ್ವೆ ನಿವಾಸಿಯ ವಿರುದ್ಧ ಬೆಳ್ಳಾರೆ ಠಾಣೆಯಲ್ಲಿ ಅಟ್ರಾಸಿಟಿ ಪ್ರಕರಣ ದಾಖಲಾಗಿದೆ.
ಪ್ರಕರಣದ ಆರೋಪಿಯನ್ನು ಜಾಗದ ಬ್ರೋಕರಿಂಗ್ ಮಾಡುವ ಮುಕ್ವೆ ನಿವಾಸಿ ಅಬ್ದುಲ್ ಮುನಾಫ್ ಎಂದು ಗುರುತಿಸಲಾಗಿದೆ. ದೂರು ನೀಡಿದ ಮಹಿಳೆಯನ್ನು ಪುತ್ತೂರು ಕಸಬಾ ಆಶ್ರಯ ಕಾಲನಿಯ ವಿನಯ ಎನ್ನಲಾಗಿದೆ.
ಘಟನೆಯ ವಿವರ:
ಕಡಬ ತಾಲೂಕಿನ ಪುಣ್ಯಪ್ಪಾಡಿ ಗ್ರಾಮದ ಮಾಂತೂರು ಶಾಲೆಯ ಹಿಂಬದಿ ಸೋಂಪಾಡಿ ಎಂಬಲ್ಲಿ ಚಂದ್ರಶೇಖರ್ ಎಂಬವರಿಗೆ ಸೇರಿದ್ದು ಎನ್ನಲಾದ ಜಮೀನನ್ನು ದೂರುದಾರ ಮಹಿಳೆಯೂ ಶುಂಠಿ ಹಾಗೂ ಬಾಳೆ ಕೃಷಿ ಮಾಡುವ ಸಲುವಾಗಿ ಲೀಸ್ ಪಡೆದುಕೊಂಡಿದ್ದರು ಎಂದು ಹೇಳಲಾಗಿದೆ. ಈ ಸಲುವಾಗಿ ಜಮೀನಿನಲ್ಲಿ ಕೂಲಿ ಕೆಲಸ ಮಾಡುತ್ತಿರುವಾಗ ಆರೋಪಿ ಮುನಾಫ್ ಇಬ್ಬರು ಅಪರಿಚಿತ ವ್ಯಕ್ತಿಗಳೊಂದಿಗೆ ಬಂದು ಈ ಜಮೀನು ನನಗೆ ಸೇರಿದ್ದು, ಅದು ನನ್ನ ಸ್ವಾಧೀನದಲ್ಲಿದೆ.
ಇಲ್ಲಿ ನೀವು ಯಾಕೆ ಕೆಲಸ ಮಾಡುತ್ತೀರಿ? ಎಂದು ಆಕ್ಷೇಪಿಸಿ ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ ಎಂದು ಯುವತಿ ದೂರಿನಲ್ಲಿ ಆರೋಪಿಸಿದ್ದಾರೆ. ಬಳಿಕ ಜಾತಿ ನಿಂದನೆಗೈದು ಬೈದು ಮೈ ಮೇಲೆ ಕೈ ಹಾಕಿ ಬೆನ್ನಿಗೆ ಹಲ್ಲೆ ನಡೆಸಿ ಮುಂದಕ್ಕೆ ನೋಡಿಕೊಳ್ಳುತ್ತೇನೆ ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಒಡ್ಡಿದ್ದಾರೆಂದು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಬ್ದುಲ್ ಮುನಾಫ್ ಪುಣ್ಯಪಾಡಿ ಗ್ರಾಮದ ಪ್ರತಿಷ್ಠಿತ ಮನೆತನವೊಂದರ ಮಹಿಳೆಯೊಂದಿಗೆ ಆತ್ಮೀಯನಾಗಿದ್ದು, ಆ ಮೂಲಕ ಅವರಿಗೆ ಸಂಬಂಧಿಸಿದ ಜಮೀನು ವ್ಯವಹಾರದಲ್ಲಿ ಈತ ಹಸ್ತಕ್ಷೇಪ ಮಾಡುತ್ತಿರುವ ಬಗ್ಗೆ ಸ್ಥಳೀಯವಾಗಿ ಆರೋಪ ಕೇಳಿ ಬಂದಿದೆ. ಜೈನ ಮಹಿಳೆಯೊಂದಿಗಿನ ಈತನ ಒಡನಾಟವನ್ನು ಆಕ್ಷೇಪಿಸಿ ಹಿಂದೂ ಪರ ಸಂಘಟನೆಯ ಮುಖಂಡರುಗಳು ಇಬ್ಬರಿಗೂ ಎಚ್ಚರಿಕೆ ನೀಡಿದ ಘಟನೆಯೂ ಈ ಹಿಂದೆ ನಡೆದಿತ್ತು. ಆದರೂ ಅದನ್ನು ಲೆಕ್ಕಿಸದೆ ಮುನಾಫ್ ಅಕೆಯ ಮನೆಗೆ ಬೇಟಿ ನೀಡುತ್ತಿದ್ದ ಎಂದು ಆರೋಪ ಕೇಳಿ ಬಂದಿದೆ.
ಸದ್ಯ ಆರೋಪಿಯು ತಲೆಮರೆಸಿಕೊಂಡಿದ್ದಾನೆ ಎಂದು ಹೇಳಲಾಗಿದ್ದು, ಪ್ರಕರಣದ ಬಗೆಗಿನ ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ. ಸವಣೂರು ಹಾಗೂ ಪುಣ್ಯಪ್ರಾಡಿಯ ಗ್ರಾಮಗಳಲ್ಲಿ ಮುನಾಫ್ ಅಕ್ರಮ ಚಟುವಟಿಕೆಯಲ್ಲಿ ನಿರತನಾಗಿದ್ದಾನೆ ಹಾಗೂ ಅನ್ಯ ಧರ್ಮೀಯ ಮಹಿಳೆಯೊಂದಿಗೆ ನಂಟು ಹೊಂದಿರುವುದರಿಂದ ಕೋಮು ಗಲಭೆ ನಡೆಯುವ ಸಾಧ್ಯತೆಯೂ ಇದೆ.
ಈ ಹಿನ್ನಲೆಯಲ್ಲಿ ಈ ಎರಡೂ ಗ್ರಾಮಗಳಿಗೆ ಭೇಟಿ ನೀಡುವುದನ್ನು ನಿರ್ಬಂಧಿಸಬೇಕು ಅಥವಾ ಆತನ ವಿರುದ್ಧ ಈ ಎರಡು ಗ್ರಾಮದ ಮಟ್ಟಿಗೆ ಗಡಿಪಾರು ಆದೇಶವನ್ನು ನೀಡುವಂತೆ ಸವಣೂರು ಹಿಂ.ಜಾ.ವೇ.ಬೆಳ್ಳಾರೆ ಪೊಲೀಸರಿಗೆ ಅಗ್ರಹಿಸಿದೆ.