

ರುದ್ರಭೂಮಿಯನ್ನು ಸಮತಟ್ಟುಗೊಳಿಸಿ ತಾಯಿ ಮಕ್ಕಳ ಆಸ್ಪತ್ರೆ ನಿರ್ಮಾಣಕ್ಕೆ ಕಾಮಗಾರಿ ಶುರುವಾಗಿದ್ದಕ್ಕೆ ಶಾಸಕ ಹಾಗೂ ಸಂಸದರ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ. ಸಮಾಧಿಗಳ ಮೇಲೆ ಆಸ್ಪತ್ರೆ ನಿರ್ಮಾಣ ಮಾಡ್ತಿರುವ ಆರೋಪ ರಾಯಚೂರು ಜಿಲ್ಲೆ ಸಿಂಧನೂರಿನಲ್ಲಿ ಕೇಳಿಬಂದಿದೆ.
ಸಿಂಧನೂರು ಪಟ್ಟಣದಿಂದ ಸುಮಾರು 8 ಕಿಮಿ ದೂರದಲ್ಲಿ ಈ ಸ್ಮಶಾನವಿದೆ. ಕಲ್ಲೂರು, ಕಲ್ಲೂರು ಕ್ರಾಸ್ ಸೇರಿ ಮೂರ್ನಾಲ್ಕು ಹಳ್ಳಿಯವರು ಈ ರುದ್ರಭೂಮಿಯನ್ನು ಬಳಸುತ್ತಿದ್ದಾರೆ. ಈ ಗ್ರಾಮಗಳಲ್ಲಿ ಯಾರೇ ಮೃತಪಟ್ಟರೂ ಇದೇ ರುದ್ರಭೂಮಿಯಲ್ಲಿ ಮಣ್ಣು ಮಾಡಲಾಗುತ್ತೆ. ಆದ್ರೆ ಇದೇ ರುದ್ರಭೂಮಿಯಲ್ಲಿ ಹೆಣಗಳ ಮೇಲೆ ತಾಯಿ ಮಕ್ಕಳ ಆಸ್ಪತ್ರೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಸ್ಮಶಾನದ ಜಾಗದಲ್ಲಿ 10.4 ಕೋಟಿ ವೆಚ್ಚದಲ್ಲಿ ಆಸ್ಪತ್ರೆಯನ್ನು ನಿರ್ಮಿಸಲಾಗುತ್ತಿದೆ.
ಸದ್ಯ ಸಿಂಧನೂರಿನಲ್ಲಿ ಕಾಮಗಾರಿ ನಡೆಯುತ್ತಿದ್ದು ಸ್ಮಶಾನದಲ್ಲಿ ತಾಯಿ ಮಕ್ಕಳ ಆಸ್ಪತ್ರೆ ನಿರ್ಮಾಣಕ್ಕೆ ವಿರೋಧ ವ್ಯಕ್ತವಾಗಿದೆ. ಸಿಂಧನೂರಿನಲ್ಲಿ ವಿವಿಧೆಡೆ 30 ಎಕರೆಯಷ್ಟು ಬೇರೆ ಜಾಗವಿದೆ ಆ ಜಾಗದಲ್ಲಿ ತಾಯಿ ಮಕ್ಕಳ ಆಸ್ಪತ್ರೆಯನ್ನು ನಿರ್ಮಾಣ ಮಾಡಿ ಆದ್ರೆ ಸ್ಮಶಾನ ಜಾಗದಲ್ಲಿ ಆಸ್ಪತ್ರೆ ನಿರ್ಮಿಸಿದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಕಾಂಗ್ರೆಸ್ ಮುಖಂಡ ಬಸನಗೌಡ ಬಾದರ್ಲಿ ಆಸ್ಪತ್ರೆ ಆಡಳಿತ ಮಂಡಳಿಗೆ ವಾರ್ನಿಂಗ್ ಕೊಟ್ಟಿದ್ದಾರೆ.
ಇದೇ ಜನವರಿ 5 ರಂದು ಗುದ್ದಲಿ ಪೂಜೆ ನಡೆದಿತ್ತು. ಸಮಾಧಿಯೊಂದರ ಮೇಲೆಯೇ ಗುದ್ದಲಿ ಪೂಜೆ ನಡೆಸಿದ್ದಾರೆ ಎಂದು ಕೆಲವರು ಆರೋಪ ಮಾಡಿದ್ದಾರೆ. ರಾಯಚೂರು ಜಿಲ್ಲೆ ಸಿಂಧನೂರು ಕ್ಷೇತ್ರದ ಶಾಸಕ ವೆಂಕಟರಾವ್ ನಾಡಗೌಡ ಹಾಗೂ ಸಂಸದ ಸಂಗಣ್ಣ ಕರಡಿ ನೇತೃತ್ವದಲ್ಲಿ ಕಾಮಗಾರಿಗೆ ಚಾಲನೆ ಸಿಕ್ಕಿತ್ತು. ಆದ್ರೆ ಶಾಸಕ ಹಾಗೂ ಸಂಸದರ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.










