ಆಂಧ್ರಪ್ರದೇಶ: ಎರಡನೇ ವರ್ಷದ ಹುಟ್ಟಿದ ಹಬ್ಬದಂದೇ ಹೆಣ್ಣು ಮಗುವೊಂದು ಸಾಂಬಾರ್ ಪಾತ್ರೆಗೆ ಬಿದ್ದು ಮೃತಪಟ್ಟ ದಾರುಣ ಘಟನೆ ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಕಲಗಾರ ಎಂಬಲ್ಲಿ ನಡೆದಿದೆ. ಮೃತ ಮಗು ಶಿವ ಮತ್ತು ಭಾನುಮತ್ ದಂಪತಿಯ ಪುತ್ರಿ ತೇಜಸ್ವಿ(2) ಎನ್ನಲಾಗಿದೆ.
ಈಕೆ. ಫೆ.13ರಂದು ಆಕೆಯ ಹುಟ್ಟಿದ ಹಬ್ಬವಿದ್ದುದರಿಂದ ಸಿಹಿ ಅಡುಗೆ, ಬಗೆಬಗೆಯ ಭಕ್ಷ್ಯಗಳನ್ನು ಮಾಡಲಾಗಿತ್ತು. ಮನೆಗೆ ಅತಿಥಿಗಳೂ ಬಂದಿದ್ದರು. ತೇಜಸ್ವಿ ಮನೆಯ ಹೊರಗೆ ಅಲ್ಲೇ ಕಣ್ಣಿಗೆ ಕಾಣುವ ದೂರದಲ್ಲಿ ಆಟವಾಡಿಕೊಳ್ಳುತ್ತಿದ್ದರೆ, ಅತ್ತ ಆಕೆಯ ಪಾಲಕರು ಬಂದ ಅತಿಥಿಗಳಿಗೆ ಸತ್ಕಾರದಲ್ಲಿ ತೊಡಗಿದ್ದರು.
ಅದ್ಯಾವ ಮಾಯದಲ್ಲಿ ತೇಜಸ್ವಿ ಅಡುಗೆ ಮನೆಗೆ ಹೋದಳೋ, ಯಾರೂ ನೋಡಲಿಲ್ಲ. ಆಗತಾನೇ ಸಾಂಬಾರನ್ನು ಕುದಿಸಿ, ಅಲ್ಲಿಯೇ ಇಡಲಾಗಿತ್ತು. ಬಾಲಕಿ ಹೋಗಿ, ಖುರ್ಚಿ ಹತ್ತಲು ಪ್ರಯತ್ನಿಸಿದ್ದಾಳೆ. ಆಯ ತಪ್ಪಿ ಬಿಸಿ ಸಾಂಬಾರಿನ ಪಾತ್ರೆಗೆ ಬಿದ್ದಿದ್ದಾಳೆ. ಸುಟ್ಟಗಾಯಗಳಿಂದ ನರಳುತ್ತಿದ್ದ ಅವಳನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಬದುಕಿಸಲು ಸಾಧ್ಯವಾಗಲಿಲ್ಲ. ಆಕಸ್ಮಿಕ ಸಾವು ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.