ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಹಿನ್ನೆಲೆ ಬೆಂಗಳೂರಿನಲ್ಲಿ ಇಬ್ಬರು ರೌಡಿಶೀಟರ್ಗಳ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಉಡುಪಿ ಮೂಲದ ಅಶಿಕ್ ಮೂಳೂರು ಮತ್ತು ಇಸಾಕ್ ಕಾಲಿಗೆ ಗುಂಡೇಟು ತಿಂದ ಪಾತಕಿಗಳು. ಆತ್ಮರಕ್ಷಣೆಗಾಗಿ ಕಾಲಿಗೆ ಗುಂಡು ಹಾರಿಸಿ ಆರೋಪಿಗಳ ಸೆರೆ ಹಿಡಿಯಲಾಗಿದೆ. ಗುಂಡೇಟು ಬಿದ್ದು ಬಂಧಿತರಾಗಿರುವ ಆರೋಪಿಗಳನ್ನು ಚಿಕಿತ್ಸೆಗಾಗಿ ಯಲಹಂಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಆರೋಪಿ ಡೆಡ್ಲಿ ದರೋಡೆಕೋರರು ಪೊಲೀಸ್ ಸಬ್ಇನ್ಸ್ಪೆಕ್ಟರ್ ಉಮೇಶ್ ಎದೆಗೆ ಚಾಕು ಇರಿದಿದ್ದರು ಎನ್ನಲಾಗಿದೆ. ಕೊತ್ತನೂರು ಠಾಣಾ ವ್ಯಾಪ್ತಿಯಲ್ಲಿ ಕಾರನ್ನ ಅಡ್ಡಗಟ್ಟಿ ಮಾರ್ಚ್ 26 ರಂದು ವ್ಯಕ್ತಿ ಸುಲಿಗೆ ಮಾಡಲಾಗಿತ್ತು. ಸುಲಿಗೆ ಬಳಿಕ ದೂರುದಾರರನ್ನ ಲೈಂಗಿಕವಾಗಿ ಬಳಸಿಕೊಂಡಿದ್ದರು. ಖಚಿತ ಮಾಹಿತಿ ಮೇರೆಗೆ ಕೊತ್ತನೂರು ಇನ್ಸ್ ಪೆಕ್ಟರ್ ಮತ್ತು ತಂಡ ಬಂಧಿಸಲು ತೆರಳಿದ್ದಾಗ ಘಟನೆ ನಡೆದಿದೆ.
ಸಂಪಿಗೆಹಳ್ಳಿ ಉಪವಿಭಾಗ ಎಸಿಪಿ ರಂಗಪ್ಪ ನೇತೃತ್ವದಲ್ಲಿ ದಾಳಿ ನಡೆದಿತ್ತು. ಇದೀಗ ಕೊತ್ತನೂರು ಠಾಣೆ ಇನ್ಸ್ಪೆಕ್ಟರ್ ಚೆನ್ನೇಶ್ ಆರೊಪಿಗಳ ಮೇಲೆ ಗುಂಡು ಹಾರಿಸಿದ್ದಾರೆ. ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಏನಿದು ʼಟೀಂ ಗರುಡ 900ʼ
ಆರೋಪಿಗಳೂ ಚಿಕ್ಕ ವಯಸ್ಸಿನಲ್ಲೇ ದರೋಡೆ, ಸುಲಿಗೆ, ಕಳ್ಳತನ, ಹಸುಗಳ್ಳತನ, ಕೃತ್ಯದಲ್ಲಿ ತೊಡಗುತ್ತಿದ್ದರು. ಉಡುಪಿ, ಮಂಗಳೂರು, ಕುಂದಾಪುರ ಕಡೆ ʼಟೀಂ ಗರುಡ 900ʼ ಹೆಸರಿನ ತಂಡ ರಚಿಸಿ ರಾತ್ರಿ ಹೊತ್ತು ಓಡಾಡುವವರನ್ನು ದರೋಡೆ ಮಾಡುತ್ತಿದ್ದರು. ಬಂದ ಹಣದಲ್ಲಿ ಐಶಾರಾಮಿ ಜೀವನ ನಡೆಸುತ್ತಿದ್ದರು. ಉಡುಪಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಬಂಧನಕ್ಕೊಳಗಾಗಿ ಜಾಮೀನು ಪಡೆದು ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದರು.
ನ್ಯಾಯಾಲಯದಿಂದ ಹೊರಡಿಸಿರುವ ವಿವಿಧ ಪೊಲೀಸ್ ಠಾಣೆಗಳಲ್ಲಿ 10 ವಾರೆಂಟ್ ಬಾಕಿ ಇತ್ತು. ಆರೋಪಿಗಳ ಪತ್ತೆಗಾಗಿ ಕೊತ್ತನೂರು ಪೊಲೀಸರು ವಿಶೇಷ ತಂಡ ರಚಿಸಿ ಕೃತ್ಯ ನಡೆದ ಸ್ಥಳಗಳಲ್ಲಿ ಸಿಸಿ ಕ್ಯಾಮಾರ ಪರಿಶೀಲಿಸಿದಾಗ ಆರೋಪಿಗಳು ದರೋಡೆ ಮಾಡಿರುವ ದೃಶ್ಯ ಸೆರೆಯಾಗಿತ್ತು. ಉಡುಪಿ, ಮಂಗಳೂರು ಮತ್ತಿತರ ಕಡೆಗಳಿಗೆ ಹೋಗಿದ್ದ ಪೊಲೀಸರ ತಂಡ ಆರೋಪಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿತ್ತು.