- Advertisement -
- Advertisement -
ಸುಳ್ಯ: ಹಳೆ ಮನೆಯ ಗೋಡೆ ಕೆಡವುತ್ತಿದ್ದಾಗ ಗೋಡೆಯು ಮೈಮೇಲೆ ಬಿದ್ದು ಮನೆಯೊಡೆಯ ಸಾವನ್ನಪ್ಪಿದ ಘಟನೆ ನಡೆದಿದೆ. ಪೆರಾಜೆ ಗ್ರಾಮದ ನಿಡ್ಯಮಲೆಯಲ್ಲಿ ಮನಕಲಕುವ ಘಟನೆ ನಡೆದಿದೆ. ನಾಗಪ್ಪ ನಾಯ್ಕ ಮೃತಪಟ್ಟ ದುರ್ದೈವಿ.
ಹಳೆ ಮನೆಯ ಗೋಡೆಯನ್ನು ನಾಗಪ್ಪ ಅವರು ತಮ್ಮ ಪುತ್ರ ದರ್ಶನ್ ಜೊತೆಗೂಡಿ ಕೆಡವುತ್ತಿದ್ದರು. ಈ ವೇಳೆ ಏಕಾಏಕಿ ಗೋಡೆ ಜರಿಯತೊಡಗಿದೆ. ಇದನ್ನು ಗಮನಿಸಿದ ನಾಗಪ್ಪ ಅವರು ತಕ್ಷಣ ಹಿಂದಕ್ಕೆ ಸರಿಯಲು ಯತ್ನಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಗೋಡೆ ನಾಗಪ್ಪ ನಾಯ್ಕ ಅವರ ಮೇಲೆ ಬಿದ್ದಿದೆ. ಇದರಿಂದ ಅವರ ಅರ್ಧ ದೇಹ ಮಣ್ಣಿನೊಳಗೆ ಸಿಲುಕಿಕೊಂಡಿತು.
ತಕ್ಷಣವೇ ಮನೆಯವರು ಮಣ್ಣು ಹೊರತೆಗೆದು ಅವರನ್ನು ಸುಳ್ಯ ಕೆವಿಜಿ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿ ಆ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದೊಯ್ದಿದ್ದಾರೆ. ಆದರೆ ಆ ವೇಳೆಗೆ ನಾಗಪ್ಪ ನಾಯ್ಕ ಅವರು ಮೃತಪಟ್ಟಿದ್ದಾರೆ. ಮೃತರು ಪತ್ನಿ ರೇವತಿ, ಪುತ್ರ ದರ್ಶನ್, ಪುತ್ರಿ ಧನ್ಯಶ್ರೀಯನ್ನು ಅಗಲಿದ್ದಾರೆ.
- Advertisement -