ರಾಮನಗರ: ನಿಧಿಯ ಆಸೆಗಾಗಿ ಏನೆನೆಲ್ಲಾ ಮಾಡ್ತಾರೆ ಅನ್ನುವುದು ನಮಗೆಲ್ಲಾ ತಿಳಿದೇ ಇದೆ. ಆಧುನಿಕ ಯುಗದಲ್ಲೂ ಮೌಢ್ಯಕ್ಕೆ ಮಾರುಹೋಗಿ ಏನೆನೆಲ್ಲಾ ಮಾಡುತ್ತಾರೆ ಅಂದರೆ ನಂಬಲೇಬೇಕು. ಇಲ್ಲೊಬ್ಬ ಮನೆಯಲ್ಲಿ ನಿಧಿ ಇದೆ ಎಂದು ನಂಬಿ ಅದನ್ನು ತೆಗೆಯಲು ಮುಂದಾಗಿದ್ದಾನೆ.
ತನ್ನ ಪತ್ನಿ ಬಳಿ ಬೆತ್ತಲೆ ಪೂಜೆ ಮಾಡೋಕೆ ಹೇಳಿದ್ದಾನೆ. ಪತ್ನಿಯಿಂದ ಇದಕ್ಕೆ ಒಪ್ಪಿಗೆ ಸಿಗದ ಹಿನ್ನಲೆ ಕೂಲಿ ಕಾರ್ಮಿಕ ಮಹಿಳೆಗೆ ಹಣದ ಆಮಿಷವೊಡ್ಡಿ ಬೆತ್ತಲಾಗುವಂತೆ ಹೇಳಿದ್ದು ನಿಧಿಯ ಆಸೆಗೆ ಬಿದ್ದ ತಂಡ ಪೊಲೀಸರ ವಶದಲ್ಲಿದೆ.
ಅಂದಹಾಗೆ ಈ ಘಟನೆ ನಡೆದಿರೋದು ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕು ಭೂಹಳ್ಳಿಯ ಶ್ರೀನಿವಾಸ್ ಮನೆಯಲ್ಲಿ. ಶ್ರೀನಿವಾಸ ಆರ್ಥಿಕ ವ್ಯವಹಾರದಲ್ಲಿ ಏಳಿಗೆ ಕಂಡಿರಲಿಲ್ಲ. ಆರು ತಿಂಗಳ ಹಿಂದೆ ಶ್ರೀರಂಗಪಟ್ಟಣದಲ್ಲಿ ಸಂಬಂಧಿಯೊಬ್ಬರ ಅಂತ್ಯಸಂಸ್ಕಾರಕ್ಕೆ ಹೋಗಿದ್ದ ಸಂದರ್ಭದಲ್ಲಿ ಪಾರ್ಥಸಾರಥಿ ಪರಿಚಯವಾಗಿದೆ.
ಮನೆಯಲ್ಲಿ ನಿಧಿ ಇದ್ದರೆ ಏಳಿಗೆ ಕಾಣುವುದಿಲ್ಲ ಎಂದು ನಂಬಿಸಿದ್ದ ಪಾರ್ಥಸಾರಥಿ ಶಶಿಕುಮಾರ್ ನನ್ನು ಪರಿಚಯಿಸಿದ್ದ. ಬೆತ್ತಲೆ ಪೂಜೆ ಮಾಡಿದರೆ ನಿಧಿ ಮೇಲೆ ಬರುತ್ತದೆ ಎಂದು ನಂಬಿಸಿದ್ದು, ಶ್ರೀನಿವಾಸನ ಪತ್ನಿ ಬೆತ್ತಲೆ ಪೂಜೆಗೆ ಒಪ್ಪದ ಕಾರಣ ತನ್ನ ಬಳಿ ಕೂಲಿ ಕೆಲಸ ಮಾಡಿಕೊಂಡಿದ್ದ ಕೂಲಿಕಾರ್ಮಿಕ ಮಹಿಳೆಗೆ 50 ಸಾವಿರ ರೂಪಾಯಿ ಕೊಡುವುದಾಗಿ ಆಮಿಷವೊಡ್ಡಿ ಪೂಜೆಗೆ ಒಪ್ಪಿಸಿದ್ದ. ಹೀಗೆ ನಿಧಿ ಆಸೆಗೆ ಬೆತ್ತಲೆ ಪೂಜೆ ನಡೆಸುವ ಮಾಹಿತಿ ಪಡೆದ ಪೊಲೀಸರು ಆರೋಪಿಗಳನ್ನು ಬಂಧಿಸಿ ಮಹಿಳೆಯನ್ನು ರಕ್ಷಿಸಿದ್ದಾರೆ ಎನ್ನಲಾಗಿದೆ.
ನಿಧಿ ಆಸೆಗಾಗಿ ಕೂಲಿ ಕಾರ್ಮಿಕ ಮಹಿಳೆಯ ಬೆತ್ತಲೆ ಪೂಜೆ ನಡೆಸುತ್ತಿದ್ದ ತಂಡವನ್ನು ಪೊಲೀಸರು ಬಂಧಿಸಿದ್ದಾರೆ. ಯಾದಗಿರಿ ಮೂಲದ ಕೂಲಿಕಾರ್ಮಿಕ ಮಹಿಳೆಯನ್ನು ರಕ್ಷಿಸಲಾಗಿದೆ. ತಮಿಳುನಾಡಿನ ಪಾರ್ಥಸಾರಥಿ, ಶಶಿಕುಮಾರ್, ನಾಗರಾಜು, ಲೋಕೇಶ್, ಮೋಹನ್, ಲಕ್ಷ್ಮೀನರಸಪ್ಪ ಬಂಧಿತ ಆರೋಪಿಗಳು ಎಂದು ಹೇಳಲಾಗಿದೆ.