ಭೂತಾರಾಧನೆ ಸಮಯದಲ್ಲಿ ದೇವರು ಮೈಮೇಲೆ ಬರುವುದು ಸತ್ಯ ಅಲ್ಲವೇ ಅಲ್ಲ. ಹೀಗಾಗಿ ದೈವ ನರ್ತಕರಿಗೆ ಸರ್ಕಾರ ಮಾಸಾಶನ ನೀಡಬಾರದು ಎಂದು ವಿವಾದಿತ ಹೇಳಿಕೆ ನೀಡಿದ್ದ ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಅವರನ್ನು ಕಾಂಗ್ರೆಸ್ ನಾಯಕ ಯುಟಿ ಖಾದರ್ ಖಂಡಿಸಿದ್ದಾರೆ.
ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಅವರು, ಬಿ.ಟಿ.ಲಲಿತಾ ನಾಯಕ್ ಅವರೇ ನಿಮ್ಮ ಬಗ್ಗೆ ನಮಗೆ ಗೌರವವಿದೆ. ಆದರೆ ದೈವ ನರ್ತಕರಿಗೆ ನೀಡಿರುವ ಮಾಶಾಸನ ಸರಿ ಅಲ್ಲ ಎಂಬ ಮಾತನ್ನ ನಾನು ಒಪ್ಪಲು ಸಿದ್ದವಿಲ್ಲ. ನನ್ನ ಕ್ಷೇತ್ರ ಹಾಗೂ ಸಂಪೂರ್ಣ ಕರಾವಳಿ ಜನರ ಪರವಾಗಿ ನಾನು ನಿಮ್ಮ ಮಾತನ್ನು ಖಂಡಿಸುತ್ತೇನೆ. ಮೊದಲು ದೈವ ನರ್ತಕರ ಪವಿತ್ರ ಆಚರಣೆ ಗೌರವಿಸಿ ಹಾಗೂ ಕರಾವಳಿ ಸಂಸ್ಕೃತಿಯನ್ನ ಅರ್ಥೈಸಿಕೊಂಡು ನಿಮ್ಮ ನಿಲುವಿನ ಬಗ್ಗೆ ಮರು ಚಿಂತನೆ ಮಾಡುವುದು ಒಳಿತು ಎಂದು ತಿರುಗೇಟು ನೀಡಿದ್ದಾರೆ.
ಬಿ.ಟಿ ಲಲಿತಾ ನಾಯಕ್ ವಿವಾದಿತ ಹೇಳಿಕೆ
ಭೂತಾರಾಧನೆ ಸಮಯದಲ್ಲಿ ದೇವರು ಬರೋದು ಸತ್ಯ ಅಲ್ಲವೇ ಅಲ್ಲ. ದೈವ ನರ್ತಕರಿಗೆ ಸರ್ಕಾರ ಎರಡು ಸಾವಿರ ರೂಪಾಯಿ ನೀಡಬಾರದಿತ್ತು ಎಂದು ವಿಚಾರವಾದಿ, ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯ್ಕ್ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು.
ದೈವ ನರ್ತಕರ ಜೀವನಕ್ಕೆ ಬೇರೆ ದಾರಿ ತೋರಿಸಬೇಕು. ಅದರ ಬದಲಾಗಿ ಸರ್ಕಾರ ಮೂಢನಂಬಿಕೆಗೆ ಪ್ರಾಮುಖ್ಯತೆ ನೀಡಿದಂತಾಗಿದೆ. ದೈವ ನರ್ತಕರು `ಓವ್’ ಅಂತ ಚಿರಾಡುವುದು, ಕುಣಿಯುವುದು ದೇವರು ಮೈಮೇಲೆ ಬರುವುದರಿಂದ ಅಲ್ಲ. ಅದಕ್ಕೆ ಬೇರೆ ಕಾರಣವಿದೆ. ರಿಷಬ್ ಶೆಟ್ಟಿ ಪಕ್ಕಾ ವಿಚಾರವಾದಿ, ವೈಚಾರಿಕ ವ್ಯಕ್ತಿ. ಆದರೆ ತನ್ನ ವಿಚಾರವನ್ನು ನೇರವಾಗಿ ಹೇಳಿ ಹೊಡಿಸಿಕೊಳ್ಳಲು ಆತ ತಯಾರಿಲ್ಲ. ಹೀಗಾಗಿ ಈ ಮಾರ್ಗ ಅನುಸರಿಸಿದ್ದಾನೆ. ಆತ ತನ್ನ ವಿಚಾರವನ್ನು ನೇರವಾಗಿ ಹೇಳಿದ್ರೆ ಈ ಮೂರ್ಖ ಜನರು ಆತನನ್ನು ಹಿಡಿದು ಹೊಡೆಯುತ್ತಾರೆ, ಪರದೆಗೆ ಬೆಂಕಿ ಹಚ್ಚುತ್ತಾರೆ. ಕೆಲವು ಜನರ ತಲೆ ಅಷ್ಟರಮಟ್ಟಿಗೆ ಕೆಟ್ಟಿದೆ ಎಂದು ವಾಗ್ದಾಳಿ ನಡೆಸಿದ್ದರು.
ದೈವ ದೇವರಿಗೆ ಅಪಾರ ಗೌರವ ಕೊಡುವ ಕರಾವಳಿಯ ಶಾಸಕ..!
ಯುಟಿ ಖಾದರ್ ಅವರು ಕರಾವಳಿಯ ದೈವ, ದೇವರುಗಳಿಗೆ ಅಪಾರ ಗೌರವ ಕೊಡುತ್ತಾರೆ. ಯಾವುದೇ ಹಬ್ಬ ಹರಿದಿನಗಳ ಸಮಯದಲ್ಲಿ ಸೌಹಾರ್ದ ಮೆರೆಯುವ ಕಾರ್ಯ ಮಾಡುತ್ತಾರೆ. ಹುಲಿವೇಷ, ಮೊಸರು ಕುಡಿಕೆ, ಗಣೇಶೋತ್ಸವದಲ್ಲಿ ಭಾಗಿಯಾಗುತ್ತಾರೆ. ಆರಾಧನಾ ಕೇಂದ್ರಗಳಿಗೆ ಅನುದಾನ ಬಿಡುಗಡೆ ಮಾಡುತ್ತಾರೆ. ತಮ್ಮ ಕ್ಷೇತ್ರ ಮಾತ್ರವಲ್ಲದೆ ಬೇರೆ ಕಡೆಗಳಿಗೂ ಹೋಗುತ್ತಾರೆ. ಕರಾವಳಿಯ ಪ್ರತಿಯೊಬ್ಬರೂ ಸಹ ದೈವದ ಮೇಲೆ ಅಪಾರ ಭಕ್ತಿ, ಭಯ ಇಟ್ಟುಕೊಂಡಿದ್ದಾರೆ. ಹೀಗಿರುವಾಗ ದೈವ ನರ್ತಕರ ವಿರುದ್ಧ ವಿವಾದಿತ ಹೇಳಿಕೆ ನೀಡಿರುವ ಲಲಿತಾ ನಾಯಕ್ ಅವರ ಹೇಳಿಕೆಯನ್ನು ಯು ಟಿ ಖಾದರ್ ತೀವ್ರವಾಗಿ ಖಂಡಿಸಿದ್ದಾರೆ.