ಬೆಂಗಳೂರು: 1999ರಲ್ಲಿ ಸಾಹಸ ಸಿಂಹ ಡಾ.ವಿಷ್ಣುವರ್ಧನ್ ನಟಿಸಿದ್ದ ‘ಸೂರ್ಯವಂಶ’ ಕನ್ನಡ ಚಿತ್ರರಂಗದಲ್ಲಿ ಸೂಪರ್ ಹಿಟ್ ಆಗಿತ್ತು. ಕಲಾ ಸಾಮ್ರಾಟ್ ಎಸ್. ನಾರಾಯಣ್ ಅವರು ನಿರ್ದೇಶಿಸಿದ್ದ ಚಿತ್ರವದು. ಅದೇ ಶೀರ್ಷಿಕೆ ಇಟ್ಟುಕೊಂಡು 23 ವರ್ಷಗಳ ನಂತರ ಈಗ ಎಸ್. ನಾರಾಯಣ್ ಅವರು ಮತ್ತೊಂದು ಸಾಹಸಕ್ಕೆ ಕೈಹಾಕಿದ್ದಾರೆ.
ಸೂರ್ಯವಂಶ ಹೆಸರಿನಲ್ಲಿ ಧಾರಾವಾಹಿ ಇನ್ನು ಕೆಲವು ದಿನಗಳಲ್ಲಿ ಉದಯ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಇಲ್ಲಿ ಮತ್ತೊಂದು ವಿಶೇಷವೆಂದರೆ ಅಂದು ವಿಷ್ಣು ಜೊತೆಗೆ ಮಾಡಿದ್ದ ಸೂರ್ಯವಂಶವನ್ನು ಇಂದು ಅವರ ಮಗನ ಸಮಾನ ಅಳಿಯ ಅನಿರುದ್ಧ್ ಜತ್ಕಾರ್ ಜೊತೆಗೆ ಮಾಡಲಿದ್ದಾರೆ. ಧಾರಾವಾಹಿಯಲ್ಲಿ ಎಸ್.ನಾರಾಯಣ್ ಮತ್ತು ಅನಿರುದ್ಧ್ ಇಬ್ಬರೂ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ.
ಈ ಮೊದಲು ಅನಿರುದ್ಧ್ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ ಜೊತೆ ಜೊತೆಯಲಿ ನಟಿಸುತ್ತಿದ್ದರು. ನಂತರ ಅದರ ನಿರ್ದೇಶಕರು ಮತ್ತು ನಿರ್ಮಾಪಕ ಆರೂರು ಜಗದೀಶ್ ರೊಂದಿಗಿನ ಮನಸ್ತಾಪದಿಂದಾಗಿ ಹೊರಬಂದರು. ಇದೀಗ ಹೊಸ ಪಯಣವನ್ನು ಅನಿರುದ್ಧ್ ಮುಂದುವರಿಸಿದ್ದಾರೆ.