ವಿಟ್ಲ: ಆರ್. ಕೆ ಯಕ್ಷಗಾನ ಕಲಾಕೇಂದ್ರ ವಿಟ್ಲ ಇದರ 2023ರ ಹೊಸ ಮುಮ್ಮೇಳ ಮತ್ತು ಹಿಮ್ಮೇಳ ತರಗತಿಗಳ ಉದ್ಘಾಟನಾ ಕಾರ್ಯಕ್ರಮವು ದಿನಾಂಕ 1.1.2023 ರಂದು ವಿಠಲ ಪ್ರೌಢ ಶಾಲೆಯ ಸಭಾಂಗಣದಲ್ಲಿ ಜರಗಿತು.
ವಿಟ್ಲ ಸೀಮೆ ಸಾಂಸ್ಕೃತಿಕ ರಂಗಕ್ಕೆ ನೀಡಿದ ಕೊಡುಗೆ ಅಪಾರ. ವಿಟ್ಲ ಅರಮನೆಯ ಸರ್ವರು ಕಲೆಗೆ ವಿಶೇಷ ಪ್ರಾಧಾನ್ಯತೆ ನೀಡಿದವರು. ಯಕ್ಷಗಾನದಂತಹ ಮಹಾನ್ ಕಲೆಯನ್ನು ಉಳಿಸಿ ಬೆಳೆಸುವ ಯತ್ನ ಸಫಲತೆಯನ್ನು ಕಾಣಲಿ ಎಂದು ಕಾರ್ಯಕ್ರಮ ಉದ್ಘಾಟಿಸಿದ ಶ್ರೀ ಬಂಗಾರು ಅರಸರು ವಿಟ್ಲ ಅರಮನೆ ಶುಭಾಂಸನೆಗೈದರು.
ಯಕ್ಷಗಾನವೆಂಬ ಶ್ರೀಮಂತ ಕಲೆ ಕೇವಲ ಪ್ರದರ್ಶನಕ್ಕೆ ಮತ್ತು ಮನರಂಜನೆಗೆ ಸೀಮಿತವಲ್ಲ, ದೇಹಕ್ಕೆ ವ್ಯಾಯಾಮ, ಮನಸ್ಸಿಗೆ ಹೊಸತನ, ಆರೋಗ್ಯ ವೃದ್ಧಿ, ಪುರಾಣಗಳ ಮಂಥನ, ಸ್ಪಷ್ಟ ಉಚ್ಚಾರ ನೀಡುತ್ತದೆ. ಕಲೆಯನ್ನು ಬೆಳೆಸಿದರೆ ನಾವು ಬೆಳೆಯುತ್ತೇವೆ ಎಂದು ಹಿರಿಯ ಯಕ್ಷಗಾನ ಹಾಸ್ಯ ಕಲಾವಿದ ಸೀತಾರಾಮ್ ಕುಮಾರ್ ಕಟೀಲು ನುಡಿದರು.
ಕಲೆ ಕೇವಲ ಕಲಿಕೆಗಾಗಿ ಅಲ್ಲ. ಶಿಸ್ತು ಆಸಕ್ತಿ ಮತ್ತು ಶ್ರಮ ಮಿಲಿತಗೊಂಡು ಬಳಿತುಕೊಂಡಾಗ ಉದ್ದೇಶ ಈಡೇರುತ್ತದೆ ಎಂದು ಆರ್. ಕೆ ಯಕ್ಷಗಾನ ಕಲಾಕೇಂದ್ರದ ನಾಟ್ಯ ಗುರುಗಳು ಮತ್ತು ಹನುಮಗಿರಿ ಮೇಳದ ಖ್ಯಾತ ಯಕ್ಷಗಾನ ಸ್ತ್ರೀ ವೇಷದಾರಿ ರಕ್ಷಿತ್ ಶೆಟ್ಟಿ ಪಡ್ರೆಯವರು ಶುಭ ಹಾರೈಸಿದರು.
ಆರ್. ಕೆ ಯಕ್ಷಗಾನ ಕಲಾಕೇಂದ್ರದ ನಿರ್ದೇಶಕ ರಾಜೇಶ್ ವಿಟ್ಲ ಸಭಾಧ್ಯಕ್ಷತೆ ವಹಿಸಿದರು. ಆರ್. ಕೆ ಸಂಸ್ಥೆಯ ಗೌರವಾಧ್ಯಕ್ಷ ಕೃಷ್ಣಯ್ಯ.ಕೆ ವಿಟ್ಲ ಅರಮನೆ, ಜಯರಾಮ ಬಲ್ಲಾಳ್ ವಿಟ್ಲ ಅರಮನೆ, ದಿನಕರ ಭಟ್ ಮಾವೆ, ಡಾ. ರಮೇಶ್ಚಂದ್ರ ಬಲಿಪಗುಳಿ, ಬಾಲಕೃಷ್ಣ ಶೆಟ್ಟಿ ಹಾಗೂ ಪೋಷಕರು ಮತ್ತು 95ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಆರ್. ಕೆ ಯಕ್ಷಗಾನ ಕಲಾಕೇಂದ್ರದ ಅಧ್ಯಕ್ಷ ಪ್ರಶಾಂತ ಚೊಕ್ಕಾಡಿ ಸ್ವಾಗತಿಸಿದರು. ಕಾರ್ಯದರ್ಶಿ ದಾಮೋದರ್ ಮಾಸ್ತರ್, ಪೋಷಕ ಲೋಕೇಶ್, ಸಹಕರಿಸಿದರು. ಮಹಿಳಾ ಸದಸ್ಯೆ ಧನಲಕ್ಷ್ಮೀ ವಂದಿಸಿದರು. ರಾಧಾಕೃಷ್ಣ ಎರುಂಬು ನಿರೂಪಿಸಿದರು.