“ಈ ಬಾರಿ ಪುತ್ತೂರಿಗೆ ಪುತ್ತಿಲ” ಎಂಬ ಘೋಷಣೆಯೊಂದಿಗೆ ಜಮಾಯಿಸಿ ಸಂಭ್ರಮಿಸಿದ ಸಾವಿರಾರು ಕಾರ್ಯಕರ್ತರು



ಜಿಲ್ಲೆಯ ಪ್ರಭಾವಿ ಹಿಂದೂ ಸಂಘಟನೆಯ ಮುಂದಾಳು ಅರುಣ್ ಕುಮಾರ್ ಪುತ್ತಿಲ ಅವರಿಗೆ ಪುತ್ತೂರು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಟಿಕೆಟ್ ದೊರೆಯದ ಹಿನ್ನೆಲೆಯಲ್ಲಿ ಬಿಜೆಪಿಯ ಬಂಡಾಯವಾಗಿ, ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ನಿರ್ಧಾರ ಕೈಗೊಂಡಿದ್ದಾರೆ.
ಕಳೆದ ಎರಡು ಅವಧಿಯಲ್ಲಿ ಅರುಣ್ ಅವರ ಹೆಸರು ಅಭ್ಯರ್ಥಿತನಕ್ಕೆ ಕೇಳಿ ಬಂದಿದ್ದರೂ ಅವಕಾಶ ಸಿಕ್ಕಿರಲಿಲ್ಲ. ಆದರೆ ಈ ಬಾರಿ ಅವರಿಗೆ ಅವಕಾಶ ನೀಡುವಂತೆ ಸಂಘ ಪರಿವಾರದ ಒಂದು ತಂಡ ತೀವ್ರ ಒತ್ತಡ ಹೇರಿತ್ತು. ಅಭ್ಯರ್ಥಿಯಾಗಿ ಆಯ್ಕೆ ಮಾಡುವಂತೆ ಅವರ ಬೆಂಬಲಿಗರು ಟ್ವಿಟರ್ ಅಭಿಯಾನದ ಮೂಲಕ ನರೇಂದ್ರ ಮೋದಿ, ಅಮಿತ್ ಶಾ ಅವರ ಗಮನಕ್ಕೆ ತರುವ ಪ್ರಯತ್ನ ಮಾಡಿದ್ದರು. ʼಈ ಬಾರಿ ಪುತ್ತೂರಿಗೆ ಪುತ್ತಿಲʼ ಎಂಬ ಈ ಅಭಿಯಾನ ಜಿಲ್ಲೆಯಲ್ಲಿ ವ್ಯಾಪಕ ಪ್ರಚಾರವನ್ನು ಪಡೆದಿತ್ತು. ಬಿಜೆಪಿಯ ಸರ್ವೇ ಕಾರ್ಯದಲ್ಲಿ ಕೇಳಿ ಬಂದಿದ್ದ ಆಕಾಂಕ್ಷಿತರ ಪಟ್ಟಿಯಲ್ಲಿ ಅರುಣ್ ಕುಮಾರ್ ಪುತ್ತಿಲರವರ ಹೆಸರು ಕೂಡ ಇತ್ತು ಎನ್ನಲಾಗಿದ್ದು ಹೀಗಾಗಿ ಈ ಬಾರಿ ಅರುಣ್ ಅವರಿಗೆ ಟಿಕೇಟ್ ಸಿಗುವ ನಿರೀಕ್ಷೆಯನ್ನು ಬೆಂಬಲಿಗರು ಹೊಂದಿದ್ದರು.

ಶಾಸಕ ಸಂಜೀವ ಮಠಂದೂರುರವರು ಬಳಸಿದ ಅಣಬೆ ಎಂಬ ಪದ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣಕ್ಕೆ ಕಾರಣವಾಗಿತ್ತು. ಜೊತೆಗೆ ಎ.11 ರಂದು ರಾತ್ರಿ ಪ್ರಕಟವಾದ ಬಿಜೆಪಿ ಅಭ್ಯರ್ಥಿ ಪಟ್ಟಿಯಲ್ಲಿ ಅರುಣ್ ಪುತ್ತಿಲ ಹೆಸರಿಲ್ಲದ ಹಿನ್ನೆಲೆ ಅರುಣ್ ಬೆಂಬಲಿಗರ ಆಕ್ರೋಶಕ್ಕೆ ಇನ್ನಷ್ಟು ಕಾರಣವಾಗಿದೆ. ಪಕ್ಷೇತರರಾಗಿ ಕಣಕ್ಕಿಳಿಯುವಂತೆ ಅರುಣ್ ಕುಮಾರ್ವರಿಗೆ ಒತ್ತಡ ಹೇರಲಾಗಿತ್ತು. ಈ ಹಿನ್ನಲೆ ಹಿಂದುತ್ವದ ಧ್ವನಿಯಾಗಿ ಇಂದು ಪಕ್ಷೇತರ ಅರ್ಭ್ಯರ್ಥಿಯಾಗಿ ಅರುಣ್ ಕುಮಾರ್ ಪುತ್ತಿಲರವರು ನಾಮಪತ್ರ ಸಲ್ಲಿಸಿದ್ದಾರೆ.
ಬೆಳಗ್ಗೆ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿವಿಶೇಷ ಪ್ರಾರ್ಥನೆ ಸಲ್ಲಿಸಿ, ಬಳಿಕ ಪುತ್ತೂರಿನ ದರ್ಬೆ ವೃತ್ತದ ಬಳಿಯಿಂದ ಪುತ್ತೂರು ತಾಲೂಕು ಆಡಳಿತ ಸೌಧದ ತನಕ ಬೃಹತ್ ಮೆರವಣಿಗೆಯಲ್ಲಿ ಸಾಗಿ ಬಂದು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಈ ವೇಳೆ ಹಿಂದೂ ಸಂಘಟನಕಾರರು, ಬೆಂಬಲಿಗರು ಸೇರಿದಂತೆ ಸಾವಿರಾರು ಕಾರ್ಯಕರ್ತರು ಜಮಾಯಿಸಿ ಸಂಭ್ರಮಿಸಿದರು.
ಹಿಂದೂ ಕಾರ್ಯಕರ್ತರ ಒತ್ತಾಯದ ಮೇರೆಗೆ ಪುತ್ತಿಲ ರವರು ಹಿಂದುತ್ವದ ಧ್ವನಿಯಾಗಿ ಚುನಾವಣೆಗೆ ಸ್ಪರ್ಧಿಸುತ್ತಿದ್ದು, ಪುತ್ತಿಲ ಪರ ಪ್ರಚಾರ ನಡೆಸಲು ಸಾವಿರಾರು ಕಾರ್ಯಕರ್ತರು ಉತ್ಸುಕರಾಗಿದ್ದಾರೆ..








