ಬಂಟ್ವಾಳ : ಪಾಣೆಮಂಗಳೂರು ಸಮೀಪದ ಮೆಲ್ಕಾರ್ ಜಂಕ್ಷನ್ನಿನಲ್ಲಿ ಗುರುವಾರ ರಾತ್ರಿ ದಸರಾ ಹಬ್ಬದ ಹುಲಿವೇಷದ ಬ್ಯಾನರ್ ತೆರವುಗೊಳಿಸುತ್ತಿದ್ದವರ ಮೇಲೆ ತಂಡವೊಂದು ತಲವಾರು ದಾಳಿ ನಡೆಸಿ ಮೂವರು ಗಾಯಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಾಚರಣೆ ನಡೆಸಿದ ಬಂಟ್ವಾಳ ನಗರ ಠಾಣಾ ಪೊಲೀಸರು ಪ್ರಮುಖ ಮೂರು ಆರೋಪಿಗಳನ್ನು ದಸ್ತಗಿರಿ ಮಾಡಿದ್ದಾರೆ.
ಪಾಣೆಮಂಗಳೂರು ಗ್ರಾಮದ ನಿವಾಸಿ ಸಂದೀಪ್ (28) ತನ್ನ ಸಹೋದರ ದೇವದಾಸ ಹಾಗೂ ಗೆಳೆಯರೊಂದಿಗೆ ಗುರುವಾರ ರಾತ್ರಿ ಮೆಲ್ಕಾರ್ ಬ್ರಿಡ್ಜ್ ಬಳಿ ವೈಭವ್ ಜುವೆಲ್ಲರ್ ಎದುರು ಭಾಗದಲ್ಲಿ ಹಾಕಿದ್ದ ಹುಲಿ ವೇಷದ ಬ್ಯಾನರ್ ಗಳನ್ನು ತೆರೆವುಗೊಳಿಸುತ್ತಿದ್ದ ವೇಳೆ ಆರೋಪಿಗಳಾದ ಪ್ರಸನ್ನ, ಶೋಧನ್ ನರಹರಿ ಪರ್ವತ ಹಾಗೂ ಪ್ರಕಾಶ್ ಯಾನೆ ಮುನ್ನ ಹಾಗೂ ಇತರರು ದಾಳಿ ನಡೆಸಿ ತಲವಾರಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರು.
ಚೂರಿ ಇರಿತದಿಂದ ಗಾಯಗೊಂಡಿರುವ ದೇವದಾಸ ಹಾಗೂ ಇತರ ಇಬ್ಬರು ಮಂಗಳೂರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿಅ.ಕ್ರ- 126/2023 ಕಲಂ: 504, 506, 324, 323, 307, ಜೊತೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿತ್ತು. ಪ್ರಕರಣದ ಬಗ್ಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಸದ್ಯ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಪ್ರಕರಣದ ತನಿಖೆ ನಡೆಸಲಾಗಿ ಪ್ರಮುಖ ಮೂವರು ಆರೋಪಿಗಳ ಪೈಕಿ ಬಂಟ್ವಾಳ, ಪಾಣೆಮಂಗಳೂರು ಗ್ರಾಮದ ನಿವಾಸಿ ಶೋಧನ್, ಬಂಟ್ವಾಳ ನರಿಕೊಂಬು ಗ್ರಾಮದ ನಿವಾಸಿಯಾದ ಪ್ರಕಾಶ್ ಎಂಬಾತನನ್ನು ಹಾಗೂ ಕೃತ್ಯಕ್ಕೆ ಸಹಕರಿಸಿದ ಇನ್ನೋರ್ವ ಆರೋಪಿಯನ್ನು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಮಾನ್ಯ ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿರುತ್ತದೆ.