ವೇಗವಾಗಿ ಬಂದ ಲಾರಿಯೊಂದು ಕಾರಿಗೆ ಡಿಕ್ಕಿ ಹೊಡೆದು ಹಿಟ್ ಅಂಡ್ ರನ್ಗೆ ಮಾವ-ಅಳಿಯ ಸಾವನ್ನಪ್ಪಿದ್ದು ಓರ್ವ ಮಹಿಳೆ ಗಂಭೀರವಾಗಿ ಗಾಯಗೊಂಡ ಘಟನೆ ಹಾಸನ ಚನ್ನರಾಯಪಟ್ಟಣ ತಾಲೂಕಿನ ಶೆಟ್ಟಿಹಳ್ಳಿ ಬೈಪಾನ್ನಲ್ಲಿ ನಡೆದಿದೆ.
ಮೃತಪಟ್ಟವರನ್ನು ಅರಸೀಕೆರೆ ತಾಲೂಕಿನ ನಾಗೇನಹಳ್ಳಿ ಗ್ರಾಮದ ಮಧು (35), ಬೇಲೂರು ತಾಲೂಕಿನ ದೇವಿಹಳ್ಳಿ ಗ್ರಾಮದ ಜವರಯ್ಯ (65) ಹಾಗೂ ಗಂಭೀರ ಗಾಯಗೊಂಡ ಮಹಿಳೆ ಮಧು ಪತ್ನಿ ಗೀತಾ ಎಂದು ಗುರುತಿಸಲಾಗಿದೆ.
ಬೆಂಗಳೂರಿನಿಂದ ತನ್ನ ಪತ್ನಿ ಹಾಗೂ ಮಾವನನ್ನ ಕಾರಿನಲ್ಲಿ ಕೂರಿಸಿಕೊಂಡು ಹಾಸನದ ಕಡೆಗೆ ಮಧು ಹೊರಟಿದ್ದರು. ಈ ವೇಳೆ ಶೆಟ್ಟಿಹಳ್ಳಿ ಬೈಪಾಸ್ ಬಳಿ ಬರುತ್ತಿದ್ದಂತೆ ಕಾರಿನ ಟೈಯರ್ ಪಂಕ್ಚರ್ ಆಗಿದೆ. ಹೀಗಾಗಿ ರಸ್ತೆಯಲ್ಲೇ ಕಾರು ನಿಲ್ಲಿಸಿಕೊಂಡು ಟೈಯರ್ ಬದಲಾವಣೆ ಮಾಡುತ್ತಿದ್ದರು.ಈ ವೇಳೆ ವೇಗವಾಗಿ ಬಂದ ಲಾರಿಯೊಂದು ಕಾರಿಗೆ ಡಿಕ್ಕಿ ಹೊಡೆದು ಹಾಗೇ ಹೋಗಿದೆ. ಪರಿಣಾಮ ಸ್ಥಳದಲ್ಲೇ ಮಧು ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಜವರಾಯ್ಯರನ್ನ ಚನ್ನರಾಯಪಟ್ಟಣ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಹಾಸನಕ್ಕೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯಯೇ ಸಾವನ್ನಪ್ಪಿದ್ದಾರೆ. ಮಧು ಪತ್ನಿ ಗೀತಾ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಹಿಟ್ ಅಂಡ್ ರನ್ ಮಾಡಿರುವ ಚಾಲಕ ಲಾರಿ ನಿಲ್ಲಿಸದೇ ಹಾಗೇ ಹೋಗಿದ್ದಾನೆ. ಚನ್ನರಾಯಪಟ್ಟಣ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.