


ಹುಬ್ಬಳ್ಳಿ: ಆನ್ಲೈನ್ ಗೇಮಿಂಗ್ ವ್ಯಾಮೋಹಕ್ಕೆ ವಿದ್ಯಾರ್ಥಿಯೋರ್ವ ವಸತಿ ನಿಲಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಡಿಕೊಂಡ ಘಟನೆ ಹುಬ್ಬಳ್ಳಿಯ ಶಿರಡಿ ನಗರದಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ ರಾಕೇಶ್ ಶ್ರೀಶೈಲ್ ಜಂಬಲದಿನ್ನಿ(21) ಎಂದು ಗುರುತಿಸಲಾಗಿದೆ.
ಈತ ಬಿವಿಬಿ ಕಾಲೇಜಿನಲ್ಲಿ ಬಿಇ 6ನೇ ಸೆಮಿಸ್ಟರ್ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ. ಶಿರಡಿ ನಗರದಲ್ಲಿರುವ ವಸತಿ ನಿಲಯದಲ್ಲಿ ವಾಸವಿದ್ದ. ರಾಕೇಶ್ ಶ್ರೀಶೈಲ್ ತಾನು ವಾಸಿಸುತ್ತಿದ್ದ ಕೋಣೆಯಲ್ಲಿ ಫ್ಯಾನ್ ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ರಾಕೇಶ್ ನಿತ್ಯ ಆನ್ಲೈನ್ ಗೇಮ್ ಆಡುತ್ತಿದ್ದನು ಎಂದು ಹೇಳಲಾಗುತ್ತಿದೆ. ಹೀಗಾಗಿ ಆನ್ ಲೈನ್ ಗೇಮ್ನಲ್ಲಿ ಹಣವನ್ನು ಕಳೆದುಕೊಂಡಿದ್ದನು ಎನ್ನಲಾಗುತ್ತಿದೆ. ಇದರಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗುತ್ತಿದೆ. ರಾಕೇಶ್ ಶ್ರೀಶೈಲ್ ಜಂಬಲದಿನ್ನಿ ಸಾವಿನ ಹಿನ್ನೆಲೆ ಪೊಲೀಸ್ ಆಯುಕ್ತ ಶಶಿಕುಮಾರ್ ವಸತಿ ನಿಲಯಕ್ಕೆ ಭೇಟಿ ನೀಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ಕೋಣೆಯ ಪರಿಶೀಲನೆ ಮಾಡಿದ್ದಾರೆ.
ಆತ್ಮಹತ್ಯೆ ವಿಷಯ ಗಮನಕ್ಕೆ ಬರುತ್ತಿದ್ದಂತೆಯೇ ಸಿಬ್ಬಂದಿ ಆತನನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಆಸ್ಪತ್ರೆ ಮುಟ್ಟುವುದರೊಳಗಾಗಿ ಆತ ಮೃತಪಟ್ಟಿದ್ದನು. ಈ ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.








