

ಸಂಬಂಧಿಕರ ಮನೆಯಲ್ಲಿದ್ದ ವೃದ್ದೆಯ ಚಿನ್ನಾಭರಣಗಳ ಮೇಲೆ ಕಣ್ಣು ಹಾಕಿ, ವೃದ್ದೆಯ ಮನೆಗೆ ನುಗ್ಗಿ 3 ಲಕ್ಷ ರೂ. ಮೌಲ್ಯದ ಮಾಂಗಲ್ಯ ಸರ ಕದ್ದ ಘಟನೆ ಚಿಕ್ಕಬಳ್ಳಾಪುರ ನಗರದ ಲ್ಲಿ ನಡೆದಿದೆ.
ಕದ್ದ ನಂತರ ಅದನ್ನು ಸ್ಮಶಾನದಲ್ಲಿ ಬಚ್ಚಿಟ್ಟು ಏನು ಗೊತ್ತಿಲ್ಲದಂತೆ ಮತ್ತೆ ಮನೆಗೆ ಹೋಗಿ ವೃದ್ದೆಯನ್ನು ಮಾತನಾಡಿಸಿಕೊಂಡು ಬಂದಿದ್ದಾನೆ. ವೃದ್ದೆ ರಾಧಮ್ಮ ಕುಟುಂಬ ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಚೆನ್ನಾಗಿದ್ದು, ರಾಧಮ್ಮ ಕತ್ತಿನಲ್ಲಿ ಎರಡೆಲೆ ಬಂಗಾರದ ಮಾಂಗಲ್ಯ ಸರ ಇತ್ತು.ರಾಧಮ್ಮನ ಮನೆಗೆ ನುಗ್ಗಿದ ಅದೊಬ್ಬ ಆಸಾಮಿ, ಆಕೆಯ ಬಾಯಿಗೆ ಖರ್ಚಿಫ್ ಇಟ್ಟು, 3 ಲಕ್ಷ ರೂ. ಮೌಲ್ಯದ ಮಾಂಗಲ್ಯದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದ. ಇದರಿಂದ ರಾಧಮ್ಮಳ ಮಗ ಅರುಣ್ಕುಮಾರ್ ಚಿಕ್ಕಬಳ್ಳಾಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರು.
ಇನ್ನು ದೂರು ದಾಖಲು ಮಾಡಿಕೊಂಡು ತನಿಖೆ ನಡೆಸಿದ ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರು, ಮೊಬೈಲ್ ಹಾಗೂ ಸಿಸಿ ಟಿವಿ ಜಾಡು ಹಿಡಿದು ಶಿಡ್ಲಘಟ್ಟ ನಗರದ ನಿವಾಸಿ ವರುಣ್ನನ್ನು ಬಂಧಿಸಿ ವಿಚಾರಣೆ ನಡೆಸಿದ್ದರು. ಈ ಕಳ್ಳತನ ಪ್ರಕರಣ ಬಯಲಾಗಿದೆ. ಇನ್ನು ವರುಣ್ ವೃದ್ದೆ ರಾಧಮ್ಮಳ ಸಂಬಂಧಿಯಾಗಿದ್ದು, 2 ಬಾರಿ ಅವರ ಮನೆಗೆ ಬಂದು ಹೋಗಿದ್ದ. ಆಗ ರಾಧಮ್ಮಳ ಕತ್ತಲ್ಲಿದ್ದ ಸರದ ಮೇಲೆ ಕಣ್ಣು ಹಾಕಿದ್ದ. ಅದರಂತೆ ಸ್ಕೆಚ್ ಹಾಕಿ ಮೊನ್ನೆ ಜುಲೈ.24 ರಂದು ಸರ ಕಿತ್ತುಕೊಂಡು ಪರಾರಿಯಾಗಿದ್ದಾನೆ. ನಂತರ ಅದನ್ನು ಸ್ಮಶಾನವೊಂದರಲ್ಲಿ ಬಚ್ಚಿಟ್ಟು, ಮತ್ತೆ ವೃದ್ದೆ ರಾಧಮ್ಮಳ ಮನೆಗೆ ಹೋಗಿ ಕಷ್ಟಸುಖ ವಿಚಾರಿಸಿಕೊಂಡು ಬಂದಿದ್ದಾನೆ. ಇದೀಗ ಆರೋಪಿಯನ್ನು ಬಂಧಿಸಿ, ಆತನಿಂದ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ.