ಕ್ರೀಡೆಯ ಬಗ್ಗೆ ಆಸಕ್ತಿ ಕಡಿಮೆ ಮಾಡಿ ಓದಿನ ಕಡೆ ಗಮನಕೊಡು ಎಂದು ಹೆತ್ತವರು ಸಲಹೆ ನೀಡಿದ್ದನ್ನೇ ದೊಡ್ಡ ವಿಚಾರ ಮಾಡಿ ಮನನೊಂದುಕೊಂಡು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಧಾರವಾಡದಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಯುವಕ ಧಾರವಾಡದ ಸಾಧನ ಕೇರಿಯ ನಿವಾಸಿ ಚೇತನ್ ತೊಂಡಿಹಾಳ ಎಂದು ಗುರುತಿಸಲಾಗಿದೆ.
ಪುಟ್ಬಾಲ್ ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದ ಯುವಕ ಎಲ್ಲಾ ಹೊತ್ತಿನಲ್ಲೂ ಆಟದ ಮೇಲೆಯೇ ಗಮನ ಕೊಡುತ್ತಿದ್ದ. ಆದರೆ, ಪಾಠದ ಕಡೆಗೆ ಗಮನ ಕೊಡುತ್ತಿರಲಿಲ್ಲ ಎನ್ನುವ ಕೊರಗು ತಂದೆಗಿತ್ತು. ಹಾಗಾಗಿ ಅವರು ಆಟ ಬಿಟ್ಟು ಸ್ವಲ್ಪ ಓದಿನ ಕಡೆಗೆ ಗಮನ ಕೊಡು ಎಂದು ಬುದ್ಧಿವಾದ ಹೇಳಿದ್ದರು. ಆದರೆ, ಚೇತನ್ ಇಷ್ಟಕ್ಕೇ ನೊಂದು ಮಾನಸಿಕ ಖಿನ್ನತೆಗೆ ಒಳಗಾಗಿದ್ದ. ಸೋಮವಾರ ಸಂಜೆ ಯಾವುದೇ ಮಾತು ಹೇಳದೆ ಮನೆಯಿಂದ ಕಾಣೆಯಾಗಿದ್ದು ಧಾರವಾಡದ ಕೆಲಗೇರಿ ಕೆರೆಗೆ ಜಿಗಿದು ಮೃತಪಟ್ಟಿದ್ದಾನೆ. ಚೇತನ್ಗಾಗಿ ಮನೆಯವರು ಭಾರಿ ಹುಡುಕಾಟ ನಡೆಸಿದ್ದರು. ಆತನ ಶವ ಬುಧವಾರ ಬೆಳಗ್ಗೆ ಕೆಲಗೇರಿ ಕೆರೆಯಲ್ಲಿ ಪತ್ತೆಯಾಗಿದೆ. ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.