ಶಿವರಾತ್ರಿ ಆಚರಣೆಯ ವೇಳೆ ಡ್ಯಾನ್ಸ್ ಮಾಡುವಾಗ ದೇಹ ತಾಗಿತು ಎಂಬ ಸಣ್ಣ ಕಾರಣಕ್ಕೆ ಯುವಕನೊಬ್ಬನನ್ನು ಕೊಲೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಗಿರಿನಗರದ ದೇವಸ್ಥಾನದ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ಯೋಗೇಶ್ (23) ಕೊಲೆಯಾದ ಯುವಕನಾಗಿದ್ದಾನೆ.
ಬೈಕ್ ಸರ್ವೀಸ್ ಸೆಂಟರ್ನಲ್ಲಿ ಯೋಗೇಶ್ ವಾಷಿಂಗ್ ಕೆಲಸ ಮಾಡುತ್ತಿದ್ದ. ನಿನ್ನೆ ಗಿರಿನಗರದ ದೇವಸ್ಥಾನದ ಕಾರ್ಯಕ್ರಮದಲ್ಲಿ ಡ್ಯಾನ್ಸ್ ಮಾಡುವಾಗ ದೇಹ ತಾಗಿತೆಂಬ ವಿಚಾರವಾಗಿ ಗಲಾಟೆ ನಡೆದಿದೆ. ಬಳಿಕ ಡ್ಯಾನ್ಸ್ ಮುಗಿಸಿ ಶ್ರೀನಗರದ ತನ್ನ ಮನೆಗೆ ಬೈಕ್ ಮೂಲಕ ಯೋಗೇಶ್ ಹೋಗುವಾಗ ನಾಲ್ವರು ಯುವಕರು ಹಿಂಬಾಲಿಸಿದ್ದಾರೆ.
ದಾಳಿ ನಡೆಸಿದ ನಾಲ್ವರು, ಚಾಕುವಿನಿಂದ ಯೋಗೀಶ್ಗೆ ಚುಚ್ಚಿದ್ದಾರೆ. ಹಂತಕರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಯೋಗೇಶ್ ಮನೆಯೊಂದರ ಕಾಂಪೌಂಡ್ ಹಾರಿದ್ದ. ಅಗ ಕಾಂಪೌಂಡ್ಗೆ ಹಾಕಿದ್ದ ಗ್ಲಾಸ್ ಚುಚ್ಚಿರಬಹುದು ಎಂದು ಕೆಲವರು ಭಾವಿಸಿದ್ದರು. ಆದರೆ ಪೊಲೀಸರು ತನಿಖೆ ಮಾಡಿದಾಗ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ.
ಪ್ರಕರಣ ದಾಖಲಿಸಿಕೊಂಡ ಬ್ಯಾಟರಾಯನಪುರ ಠಾಣಾ ಪೊಲೀಸರು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಸದ್ಯ ಬಂಧಿತರನ್ನು ತನಿಖೆ ನಡೆಸಲಾಗುತ್ತಿದೆ