35 ರ ಆಂಟಿಯ ಸೌಂದರ್ಯಕ್ಕೆ ಮರುಳಾಗಿ ಲಕ್ಷ ಲಕ್ಷ ಹಣ ಕಳೆದುಕೊಂಡು ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಕೊಡಗಿನಲ್ಲಿ ನಡೆದಿದೆ.
ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲ್ಲೂಕಿನ ಹಾತೂರು ಗ್ರಾಮದ ಸರೋಜ ಎಂಬುವರ ಮಗ ಅಜಿತ್ ಗಣಪತಿ ಮೃತಪಟ್ಟ ದುರ್ದೈವಿ ಯುವಕ.
ಗೋಣಿಕೊಪ್ಪಲಿನಲ್ಲಿ ಖಾಸಗಿ ಬಸ್ಸಿನ ಚಾಲಕನಾಗಿ ಕೆಲಸ ಮಾಡುತ್ತಿದ್ದ ಅಜಿತ್ಗೆ ನಾಲ್ಕು ವರ್ಷಗಳ ಹಿಂದೆ ಬಿರುನಾಣಿ ಸಮೀಪದ ಪೂಕೊಳ ಗ್ರಾಮದ ಬಿನ್ಯ ಬೋಜಮ್ಮ ಎಂಬಾಕೆಯ ಪರಿಚಯವಾಗಿದೆ. ಆ ಪರಿಚಯ ಪ್ರೀತಿಗೆ ತಿರುಗಿ ಯುವಕ ತನ್ನೆಲ್ಲಾ ಸರ್ವಸ್ವವನ್ನು ಆಕೆಗೆ ಧಾರೆ ಎರೆದಿದ್ದಾನೆ.
ತನ್ನ ದುಡಿಮೆಯ ಹಣ ಸಾಕಾಗದೆ ಮನೆಯಲ್ಲಿದ್ದ ಚಿನ್ನ ಅಡವಿಟ್ಟು ಆಕೆಗೆ ಹಣ ನೀಡುತ್ತಿದ್ದ ಎಂದು ಆತನ ಸಹೋದರರು ಆರೋಪಿಸಿದ್ದಾರೆ. ಸ್ನೇಹಿತರು ಸಂಬಂಧಿಕರ ಬಳಿಯಲೆಲ್ಲಾ 50 ಸಾವಿರ, ಲಕ್ಷ ಅಂತ ಸಾಲ ಮಾಡಿದ್ದನಂತೆ. ತನ್ನ ಬಳಿ ಇದ್ದ ಸ್ಮಾರ್ಟ್ ಫೋನನ್ನು ಬಿಡದೆ ಮಾರಾಟ ಮಾಡಿದ್ದಾನೆ. ಕೊನೆಗೆ ತನ್ನ ತಾಯಿಯ ಬಳಿ ಇದ್ದ ಕೀ ಪ್ಯಾಡ್ ಫೋನನ್ನು ಬಳಸುವ ಹಂತಕ್ಕೆ ಎಲ್ಲವನ್ನು ಕಳೆದುಕೊಂಡಿದ್ದಾನೆ.
ಸುಂದರಿಯ ಮೋಸದ ಜಾಲಕ್ಕೆ 8 ರಿಂದ 9 ಯುವಕರು ಮೋಸ ಹೋಗಿದ್ದಾರೆ ಅಂತ ಅಜಿತ್ ಡೆತ್ ನೋಟ್ನಲ್ಲಿ ಉಲ್ಲೇಖಿಸಿದ್ದಾನೆ. ಗೋಣಿಕೊಪ್ಪ ಪೊಲೀಸರು ವಂಚಕಿ ಕೆ.ಬಿನ್ಯ ಬೋಜಮ್ಮ ಹಾಗೂ ಕಿರಣ್ ಗೌಡನನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.