ಮಂಗಳೂರು: ಉಳ್ಳಾಲ ನೇತ್ರಾವತಿ ಸೇತುವೆಯಲ್ಲಿ ಸೋಮವಾರ ರಾತ್ರಿ ಸಂಭವಿಸಿದ ಸರಣಿ ಅಪಘಾತದಲ್ಲಿ ಲಾರಿ, ಕಾರು, ಆಟೊ ರಿಕ್ಷಾ ಸಹಿತ ಹಲವು ವಾಹನಗಳಿಗೆ ಹಾನಿಯಾಗಿವೆ. ಅಲ್ಲದೆ ಇಬ್ಬರಿಗೆ ಸಣ್ಣಪುಟ್ಟ ಗಾಯವಾಗಿದೆ ಎಂದು ಸಂಚಾರ ದಕ್ಷಿಣ ಠಾಣೆಯ ಪೊಲೀಸರು ತಿಳಿಸಿದ್ದಾರೆ.
ನಗರದ ಪಂಪ್ವೆಲ್ನಿಂದ ತೊಕ್ಕೊಟ್ಟು ಕಡೆಗೆ ತೆರಳುವ ಉಳ್ಳಾಲ ನೇತ್ರಾವತಿ ಸೇತುವೆಯಲ್ಲಿ ಡೀಸೆಲ್ ಖಾಲಿಯಾಗಿ ಲಾರಿಯೊಂದು ನಿಂತಿತ್ತು. ಸೋಮವಾರ ಸಂಜೆಯ ವೇಳೆ ನಗರದಲ್ಲಿ ಭಾರೀ ಮಳೆಯಾಗಿದ್ದು, ಈ ಸಂದರ್ಭ ನಿಂತಿದ್ದ ಲಾರಿಯನ್ನು ಗಮನಿಸದ ಸ್ವಿಪ್ಟ್ ಕಾರು ಲಾರಿಗೆ ಢಿಕ್ಕಿ ಹೊಡೆದಿದೆ. ಇದರ ಹಿಂದಿನಿಂದ ಬರುತ್ತಿದ್ದ ಕೇರಳ ನೋಂದಣಿಯ 3 ಕಾರು ಒಂದಕ್ಕೊಂದು ಢಿಕ್ಕಿಯಾಗಿದೆ. ಅಲ್ಲದೆ ಪಿಕಪ್, ಬಸ್ ಕೂಡಾ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಸರಣಿ ಅಪಘಾತದಿಂದ ನೇತ್ರಾವತಿ ಸೇತುವೆ ಯುದ್ದಕ್ಕೂ ರಸ್ತೆ ಬ್ಲಾಕ್ ಆಗಿದ್ದು ವಾಹನ ಸವಾರರು ಪರದಾಟ ನಡೆಸಬೇಕಾಯಿತು.ಮಾಹಿತಿ ಪಡೆದ ಸ್ಥಳಿಯ ಪೊಲೀಸರು ಸಾರ್ವಜನಿಕರ ಸಹಕಾರದಿಂದ ಸಂಚಾರ ದಟ್ಟಣೆ ನಿವಾರಿಸಲು ಪ್ರಯತ್ನಿದರು.
ಮಂಗಳೂರು ದಕ್ಷಿಣ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ.