ಬಂಟ್ವಾಳ : ಕೆಎಸ್ಆರ್ಟಿಸಿ ಬಸ್ ಮತ್ತು ಕಾರು ಢಿಕ್ಕಿಯಾಗಿ ಕಾರು ಚಾಲಕ ಗಂಭೀರವಾಗಿ ಗಾಯಗೊಂಡ ಘಟನೆ ಇಂದು ಬಂಟ್ವಾಳ-ಬೆಳ್ತಂಗಡಿ ರಾಷ್ಟ್ರೀಯ ಹೆದ್ದಾರಿಯ ಬಂಟ್ವಾಳ ತಾಲೂಕಿನ ಬಾಂಬಿಲ ಎಂಬಲ್ಲಿ ಸಂಭವಿಸಿದೆ.
ಕಾರು ಚಾಲಕನನ್ನು ಕಾವಳಪಡೂರು ಗ್ರಾಮದ ಮಧ್ವಪಲ್ಕೆ ನಿವಾಸಿ ಸಿರಿಲ್ ಡಿಸೋಜ ಎಂದು ಗುರುತಿಸಲಾಗಿದೆ.
ಬಾಂಬಿಲ ಸೇತುವೆ ಬಳಿಯ ತಿರುವಿನಲ್ಲಿ ಢಿಕ್ಕಿಯಾಗಿದ್ದು, ಅಪಘಾತದ ತೀವ್ರತೆಯಲ್ಲಿ ಕಾರಿನ ಮುಂಭಾಗ ಬಸ್ನ ಅಡಿಯಲ್ಲಿ ಸಿಲುಕಿದ್ದು, ಸಂಪೂರ್ಣ ನಜ್ಜುಗುಜ್ಜಾಗಿದೆ. ಬಳಿಕ ಬಸ್ ಅನ್ನು ಹಿಂತೆಗೆದು ಕಾರು ಚಾಲಕನನ್ನು ಹೊರ ತೆಗೆಯಲಾಗಿತ್ತು. ತತ್ಕ್ಷಣವೇ ಸ್ಥಳೀಯರು ಖಾಸಗಿ ಅಂಬ್ಯಲೆನ್ಸ್ ನಲ್ಲಿ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಸಿರಿಲ್ ಅವರ ಕಾಲು ಮುರಿತಗೊಂಡಿದ್ದು, ಅದೃಷ್ಟವಶಾತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಸಂದರ್ಭದಲ್ಲಿ ಬಸ್ ಚಾಲಕನನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದರು. ಈ ಸ್ಥಳದಲ್ಲಿ ಪದೇಪದೇ ಅಪಘಾತಗಳಾಗುತ್ತಿದ್ದು, ಹೆದ್ದಾರಿ ಅಭಿವೃದ್ಧಿ ಸಮಯದಲ್ಲಿ ಅವೈಜ್ಞಾನಿಕ ತಿರುವು ನೀಡಿರುವುದು ಕಾರಣ ಎಂದು ಸಾರ್ವಜನಿಕರು ದೂರಿದ್ದಾರೆ.ಬಂಟ್ವಾಳ ಟ್ರಾಫಿಕ್ ಎಸ್ ಐ.ಸುತೇಶ್ , ಬಂಟ್ವಾಳ ಗ್ರಾಮಾಂತರ ಎಸ್ಐ ಹರೀಶ್ ಅವರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು, ರಸ್ತೆ ಸುರಕ್ಷತೆ ಬಗ್ಗೆ ಕ್ರಮ ಕೈಗೊಳ್ಳಲು ಹೆದ್ದಾರಿ ಪ್ರಾಧಿಕಾರಕ್ಕೆ ಮನವಿ ಮಾಡುವುದಾಗಿ ಟ್ರಾಫಿಕ್ ಎಸ್ಐ ಸುತೇಶ್ ಅವರು ತಿಳಿಸಿದ್ದಾರೆ.