ಚೆನೈ: ತಮಿಳಗ ವೆಟ್ರಿ ಕಳಗಂ (ಟಿವಿಕೆ) ಅಧ್ಯಕ್ಷ ಹಾಗೂ ನಟ-ರಾಜಕಾರಣಿ ಸಿ. ಜೋಸೆಫ್ ವಿಜಯ್ ಅವರು ಪೆರಂಬೂರ್ ಮತ್ತು ತಿರುಚಿ ಪೂರ್ವ ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಪರಿಷ್ಕೃತ ನಾಮಪತ್ರಗಳನ್ನು ಸಲ್ಲಿಸಿದ್ದಾರೆ.

ಮುಂಬರುವ ಚುನಾವಣೆಯಲ್ಲಿ ಮೊದಲ ಬಾರಿಗೆ ಚುನಾವಣಾ ಕಣಕ್ಕಿಳಿಯುತ್ತಿರುವ ವಿಜಯ್ ಪರವಾಗಿ ಈ ಪರಿಷ್ಕೃತ ನಾಮಪತ್ರಗಳನ್ನು ಸಲ್ಲಿಸಲಾಗಿದೆ. ನಾಮಪತ್ರಗಳಲ್ಲಿನ ಮಾಹಿತಿಯಲ್ಲಿ ಕಂಡುಬಂದ ಕೆಲವು ವ್ಯತ್ಯಾಸಗಳನ್ನು ಸರಿಪಡಿಸಿರುವುದಾಗಿ ಮೂಲಗಳು ತಿಳಿಸಿವೆ.
ಪರಿಷ್ಕೃತ ನಾಮಪತ್ರಗಳಲ್ಲಿ ತಮ್ಮ ವಿರುದ್ಧ ಎರಡು ಪ್ರಕರಣಗಳು ಬಾಕಿ ಇರುವುದಾಗಿ ವಿಜಯ್ ಘೋಷಿಸಿದ್ದಾರೆ. ಕೊಲತ್ತೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಪೆರವಲ್ಲೂರು ಪೊಲೀಸ್ ಠಾಣೆಯಲ್ಲಿ ಮಾರ್ಚ್ 30ರಂದು ನಾಮಪತ್ರ ಸಲ್ಲಿಸಿದ ಬಳಿಕ ಚುನಾವಣಾ ನಿಯಮ ಉಲ್ಲಂಘಿಸಿ ಪ್ರಚಾರ ನಡೆಸಿದ ಆರೋಪದ ಮೇಲೆ ಒಂದು ಪ್ರಕರಣ ದಾಖಲಾಗಿದೆ. ಇನ್ನೊಂದು ಪ್ರಕರಣ ಮಧುರೈ ಜಿಲ್ಲೆಯ ಕೂಡಕೋವಿಲ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, 2025ರ ಆಗಸ್ಟ್ ನಲ್ಲಿ ನಡೆದ ಟಿವಿಕೆಯ ಎರಡನೇ ಸಮ್ಮೇಳನದ ವೇಳೆ ಕ್ಯಾಂಪ್ ಮೇಲೆ ಹತ್ತಿದ ಬೆಂಬಲಿಗರನ್ನು ಭದ್ರತಾ ಸಿಬ್ಬಂದಿ ತಳ್ಳಿದ ಪರಿಣಾಮ ಗಾಯಗಳಾಗಿದೆಯೆಂಬ ಆರೋಪಕ್ಕೆ ಸಂಬಂಧಿಸಿದೆ.ಹಿಂದಿನ ನಾಮಪತ್ರಗಳಲ್ಲಿ ಉಲ್ಲೇಖಗೊಂಡಿದ್ದ ವ್ಯತ್ಯಾಸಗಳನ್ನು ಈ ಬಾರಿ ಸರಿಪಡಿಸಲಾಗಿದೆ.
ವಿಜಯ್ ಅವರ ವಯಸ್ಸಿನ ವಿವರಗಳಲ್ಲಿ ತಿದ್ದುಪಡಿ ಮಾಡಲಾಗಿದೆ. ಜೊತೆಗೆ ಜಯ ನಗರ ಪ್ರಾಪರ್ಟಿ ಪ್ರೈವೇಟ್ ಲಿಮಿಟೆಡ್ ನಲ್ಲಿ ಹೊಂದಿರುವ ಷೇರುಗಳ ಮೌಲ್ಯವನ್ನು ನವೀಕರಿಸಲಾಗಿದೆ. ಪತ್ನಿ ಸಂಗೀತಾ ಅವರ ಹೆಸರಿನಲ್ಲಿರುವ ಬೆಳ್ಳಿಯ ಮೌಲ್ಯದಲ್ಲಿಯೂ ಪರಿಷ್ಕರಣೆ ಮಾಡಲಾಗಿದೆ.ಇದಲ್ಲದೆ, ವಿಜಯ್ ಹಾಗೂ ಅವರ ಪತ್ನಿಯ ಹೆಸರಿನಲ್ಲಿರುವ ಸ್ಥಿರ ಆಸ್ತಿಗಳ ಒಟ್ಟು ಅಂದಾಜು ಮಾರುಕಟ್ಟೆ ಮೌಲ್ಯವನ್ನು ಸರಿಪಡಿಸಲಾಗಿದೆ. ಅವರ ಪುತ್ರ ಜೇಸನ್ ಸಂಜಯ್ ಮತ್ತು ಮಗಳು ದಿವ್ಯಾ ಶಶಾ ಅವರ ಹೆಸರಿನಲ್ಲಿರುವ ಚರ ಆಸ್ತಿಗಳ ವಿವರಗಳನ್ನೂ ಪರಿಷ್ಕೃತ ನಾಮಪತ್ರಗಳಲ್ಲಿ ನವೀಕರಿಸಲಾಗಿದೆ.








