ಉಳ್ಳಾಲ: ಇಷ್ಟಾರ್ಥ ಈಡೇರಿಸಿದ್ದಕ್ಕಾಗಿ ಕನ್ನಡ ಚಿತ್ರರಂಗದ ಖ್ಯಾತ ನಟಿ ರಕ್ಷಿತಾ ಪ್ರೇಮ್ ಅವರು ಇಲ್ಲಿನ ಕಾರಣಿಕ ಸ್ಥಳ ಕುತ್ತಾರು ಕೊರಗಜ್ಜ ದೈವದ ಆದಿಕ್ಷೇತ್ರಕ್ಕೆ ಆಗಮಿಸಿದ್ದು ಬೆಳ್ಳಿ ದೀಪ ಮತ್ತು ಬೆಳ್ಳಿಯ ಘಂಟೆಯನ್ನ ಹರಕೆಯಾಗಿ ಸಲ್ಲಿಸಿದ್ದಾರೆ.
ಸುಂಟರಗಾಳಿ, ಕಲಾಸಿಪಾಳ್ಯ ಚಿತ್ರದ ಖ್ಯಾತಿಯ ನಟಿ ರಕ್ಷಿತಾ ಪ್ರೇಮ್ ಈಗ ಝೀ ಕನ್ನಡ ವಾಹಿನಿಯಲ್ಲಿ ಕಾಮಿಡಿ ಕಿಲಾಡಿ, ಡಾನ್ಸ್ ಕರ್ನಾಟಕ ರಿಯಾಲಿಟಿ ಶೋ ನಡೆಸುತ್ತಿದ್ದಾರೆ. ಇಂದು ಮಧ್ಯಾಹ್ನ ಮಂಗಳೂರು ಹೊರವಲಯದ ಕುತ್ತಾರು ಸ್ವಾಮಿ ಕೊರಗಜ್ಜ ದೈವದ ಆದಿ ಕ್ಷೇತ್ರಕ್ಕೆ ಭೇಟಿ ನೀಡಿ ಹರಕೆ ಸಲ್ಲಿಸಿದ್ದಾರೆ. ನಂಬಿದವರ ಇಷ್ಟಾರ್ಥಗಳನ್ನ ಈಡೇರಿಸುವ ಕಾರಣೀಕ ಶಕ್ತಿ ಸ್ವಾಮಿ ಕೊರಗಜ್ಜ ದೈವಕ್ಕೆ ದೇಶ, ವಿದೇಶಗಳಲ್ಲಿ ಅಪಾರ ಭಕ್ತರಿದ್ದಾರೆ.
ಸದ್ಯ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋನಲ್ಲಿ ಚಾರ್ಮಿಂಗ್ ಜಡ್ಜ್ ಆಗಿ ಮಿಂಚುತ್ತಿರುವ ರಕ್ಷಿತಾ, ತನ್ನ ಮನದಾಸೆಯೊಂದು ಈಡೇರಿದ್ದಕ್ಕಾಗಿ ಕೊರಗಜ್ಜನ ಕ್ಷೇತ್ರಕ್ಕೆ ಬಂದಿದ್ದಾರೆ. ಆಸೆ ಈಡೇರಿದರೆ ಬೆಳ್ಳಿಯ ದೀಪ, ಘಂಟೆಯನ್ನ ಹರಕೆ ನೀಡುವುದಾಗಿ ರಕ್ಷಿತಾ ಪ್ರಾರ್ಥಿಸಿದ್ದರು ಎನ್ನಲಾಗಿದೆ. ಆಶಯ ಈಡೇರುತ್ತಿದ್ದಂತೆ ರಕ್ಷಿತಾ ಅವರು ಕುತ್ತಾರಿನ ಕೊರಗಜ್ಜನ ಆದಿ ಕ್ಷೇತ್ರಕ್ಕೆ ಬಂದು ಹರಕೆ ಸಲ್ಲಿಸಿದ್ದಾರೆ.
ನಿನ್ನೆ ರಕ್ಷಿತಾ ಪ್ರೇಮ್ ಅವರು ಪೊಳಲಿ ಶ್ರೀ ರಾಜರಾಜೇಶ್ವರಿ ಮತ್ತು ಕಟೀಲು ದುರ್ಗಾಪರಮೇಶ್ವರಿ ಕ್ಷೇತ್ರ ದರ್ಶನ ನಡೆಸಿ ಇಂದು ಕುತ್ತಾರು ಕೊರಗಜ್ಜನ ಆದಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ನೆಚ್ಚಿನ ನಟಿಯ ಜೊತೆ ಕುತ್ತಾರಿನ ಸ್ಥಳೀಯ ಅಭಿಮಾನಿಗಳು ಸೆಲ್ಫಿ ಕ್ಲಿಕ್ಕಿಸಿದ್ದಾರೆ.
ಕೋಸ್ಟಲ್ ವುಡ್ ಖಳ ನಟ ಕಿಶೋರ್ ಡಿ.ಕೆ, ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋನಲ್ಲಿ ಮಿಂಚಿದ್ದ ಕಲಾವಿದರಾದ ಧೀರಜ್ ನೀರುಮಾರ್ಗ, ಸೂರಜ್ ಪಾಂಡೇಶ್ವರ, ಬೆಂಗಳೂರಿನ ಖ್ಯಾತ ಕೊರಿಯೋಗ್ರಾಫರ್ ರಾಹುಲ್ ಮತ್ತು ಪ್ರಜ್ವಲ್ ಮೊದಲಾದವರು ಜೊತೆಗಿದ್ದರು.