




ಅಳಿಕೆ: ಅಳಿಕೆ ಗ್ರಾಮದ ಬಂಟರ ಸಮ್ಮಿಲನ ಕಾರ್ಯಕ್ರಮ ‘ಸ್ನೇಹಕೂಟ–2025’ ಅಳಿಕೆ ಚಂದಾಡಿ ಸಾಯಿಗೀತರವರ ಮನೆಯಲ್ಲಿ ಅತ್ಯಂತ ಯಶಸ್ವಿಯಾಗಿ ಹಾಗೂ ವಿಜೃಂಭಣೆಯಿಂದ ನಡೆಯಿತು. ಕಾರ್ಯಕ್ರಮದ ಅಂಗವಾಗಿ ಯಕ್ಷರಂಗದ ಮೇರು ಕಲಾವಿದರಾದ ಅಳಿಕೆ ಲಕ್ಷ್ಮಣ ಶೆಟ್ಟಿ ಅವರ ಸಂಸ್ಮರಣಾರ್ಥವಾಗಿ ವಿಶೇಷ ಯಕ್ಷಗಾನ ವೈಭವ ಆಯೋಜಿಸಲಾಗಿತ್ತು.
ಯಕ್ಷದ್ರುವ ಪಟ್ಲ ಸತೀಶ್ ಶೆಟ್ಟಿ ಅವರ ಹಿರಿತನದಲ್ಲಿ ನಡೆದ ಯಕ್ಷಗಾನ ಕಾರ್ಯಕ್ರಮದಲ್ಲಿ, ಭಾಗವತಿಕೆಯಲ್ಲಿ ಡಾ. ಪ್ರಖ್ಯಾತ್ ಶೆಟ್ಟಿ ಅಳಿಕೆ ಹಾಗೂ ಸಿದ್ದಕಟ್ಟೆ ಭರತ್ ಶೆಟ್ಟಿ ಅವರ ಮಧುರ ಕಂಠ ಯಕ್ಷಪ್ರೇಮಿಗಳನ್ನು ಮಂತ್ರಮುಗ್ಧರನ್ನಾಗಿಸಿತು. ಚಂಡೆಯಲ್ಲಿ ರೋಹಿತ್ ಉಚ್ಚಿಲ ಹಾಗೂ ಮದ್ದಳೆಯಲ್ಲಿ ಮಯೂರ್ ನಾಯ್ಗ ಅವರ ಕೈಚಳಕ ಪ್ರೇಕ್ಷಕರಿಂದ ಭಾರೀ ಕೈತಪ್ಪಾಳೆ ಗಳಿಸಿತು. ಈ ಸಂದರ್ಭದಲ್ಲಿ ಯುವ ಭಾಗವತ ಡಾ. ಪ್ರಖ್ಯಾತ್ ಶೆಟ್ಟಿ ಅಳಿಕೆ ದಂಪತಿಗಳನ್ನು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.
ಗ್ರಾಮದ ಹಿರಿಯ ಮಾತೆಯರಾದ ಸಂಪಾವತಿ ಸಾಮಾನಿ ನೆಕ್ಕಿತಪುಣಿ ಹಾಗೂ ಸೀತಮ್ಮ ಮಡಿಯಾಲ ಅವರನ್ನು ಗೌರವಿಸಿ ಸನ್ಮಾನಿಸಿದ ಕ್ಷಣ ಕಾರ್ಯಕ್ರಮಕ್ಕೆ ವಿಶೇಷ ಸಾರ್ಥಕತೆಯನ್ನು ತಂದಿತು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಿತ್ತಳಿಕೆ ಸೂರ್ಯನಾಥ ಆಳ್ವ, ಕರ್ನಾಟಕ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಯ ಶ್ರೀಮತಿ ಮಲ್ಲಿಕಾ ಪಕಳ ಮಲಾರ್, ವಿಟ್ಲ ವಲಯ ಬಂಟರ ಸಂಘದ ಅಧ್ಯಕ್ಷ ಕುಂಡಕೋಳಿ ರಾಜೀವ್ ಭಂಡಾರಿ, ಉದ್ಯಮಿ ಪ್ರಭಾಕರ ಶೆಟ್ಟಿ ದಂಬೆಕಾನ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಬಂಟರ ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ಪ್ರಶಂಸನೀಯ ಅಭಿಪ್ರಾಯಗಳು ಸಭೆಯಲ್ಲಿ ವ್ಯಕ್ತವಾಯಿತು.
ಅಳಿಕೆ ಬಂಟರ ಸಂಘದ ಅಧ್ಯಕ್ಷ ಮೋಹನದಾಸ್ ರೈ ಎರುಂಬು, ಮಹಿಳಾ ಸಂಘದ ಅಧ್ಯಕ್ಷೆ ಸಾಯಿಗೀತಾ, ಯುವ ಬಂಟರ ಸಂಘದ ಅಧ್ಯಕ್ಷ ಅಕ್ಷಯ್ ಶೆಟ್ಟಿ ಕೊಲ್ಯ, ನಿಕಟಪೂರ್ವ ಅಧ್ಯಕ್ಷ ಆನಂದ ಶೆಟ್ಟಿ ಚಿಪ್ಪಾರುಗುತ್ತು, ಚಂದಾಡಿ ಮನೆತನದ ಹಿರಿಯ ಜಗತ್ಪಾಲ ಶೆಟ್ಟಿ ಚಂದಾಡಿ ಹಾಗೂ ಗೌರವಾಧ್ಯಕ್ಷ ಮಿತ್ತಳಿಕೆ ಚಂದ್ರನಾಥ ಆಳ್ವ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ನಿಕಟಪೂರ್ವ ಅಧ್ಯಕ್ಷ ರಾಜೇಂದ್ರ ರೈ ಪಡಿಬಾಗಿಲು ಮತ್ತು ದಿನೇಶ್ ಶೆಟ್ಟಿ ಅಳಿಕೆ ನಿರೂಪಿಸಿದರು. ಕಾರ್ಯದರ್ಶಿ ಸದಾಶಿವ ಶೆಟ್ಟಿ ಅಳಿಕೆ ವಂದನಾರ್ಪಣೆ ಸಲ್ಲಿಸಿದರು.
ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಮಧ್ಯಾಹ್ನ ಭಟ್ರ ಊಟ ಹಾಗೂ ಶೆಟ್ರ ಊಟದ ಪ್ರತ್ಯೇಕ ವ್ಯವಸ್ಥೆ ಜನಾಕರ್ಷಣೀಯವಾಗಿತ್ತು. ಸಮಾಜಬಾಂಧವರೆಲ್ಲರು ಒಟ್ಟಾಗಿ ಪಾಲ್ಗೊಂಡ ಈ ಸಮ್ಮಿಲನ ಕಾರ್ಯಕ್ರಮ ಸಹಮತ ಮತ್ತು ಸ್ನೇಹಭಾವದೊಂದಿಗೆ ಯಶಸ್ವಿಯಾಗಿ ಸಮಾಪ್ತಿಗೊಂಡಿತು








