ವಿಟ್ಲ: ವಿಟ್ಲ ವ್ಯವಸಾಯ ಸೇವಾ ಸಹಕಾರಿ ಸಂಘ (ನಿ.) ವಿಟ್ಲ ಇದರ 2022-23ನೇ ಸಾಲಿನ ವಾರ್ಷಿಕ ಮಹಾಸಭೆಯು ಸೆ.23ರಂದು ಪೊನ್ನೊಟ್ಟು ‘ಬ್ರಹ್ಮಶ್ರೀ ನಾರಾಯಣ ಗುರು ಸಮುದಾಯ ಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಸಂಘದ ಹಿರಿಯ ಸದಸ್ಯರಾದ ಸೀತಾರಾಮ ಶೆಟ್ಟಿ ಒಕ್ಕೆತ್ತೂರು, ಸುಬ್ರಹ್ಮಣ್ಯ ಭಟ್ ಕೆ.ಟಿ, ಭೋಜಪ್ಪ ಗೌಡ ಗೌಡ ಹಾಗೂ ಶಶಿಕಲಾ ಕೆ.ಪಿ ದೀಪ ಪ್ರಜ್ವಲನೆಗೈದು ಉದ್ಘಾಟಿಸಿದರು. ಸಭಾಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ನರ್ಸಪ್ಪ ಪೂಜಾರಿ ಯನ್.ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಭೆಯಲ್ಲಿ 2022-23 ನೇ ಸಾಲಿನ ವಾರ್ಷಿಕ ವರದಿ ಮಂಡನೆ ಹಾಗೂ ಜಮಾ ಖರ್ಚು ವ್ಯಾಪಾರ ಲಾಭ ನಷ್ಟ ಮತ್ತು ಆಸ್ತಿ ಜವಾಬ್ದಾರಿ ತಖ್ತೆಗಳ ಮಂಜೂರಾತಿ, ಲೆಕ್ಕ ಪರಿಶೋಧನೆ, ಅಂದಾಜು ಆಯವ್ಯಯ ಪಟ್ಟಿ, ಲಾಭಾಂಶ ವಿಂಗಡನೆ, ಸಂಯೋಜಿತ ಸಂಸ್ಥೆಗಳಿಗೆ ಪ್ರತಿನಿಧಿಗಳ ಆಯ್ಕೆ, ಲೆಕ್ಕ ಪರಿಶೋಧಕರ ಆಯ್ಕೆ ಸೇರಿದಂತೆ ವಿವಿಧ ಕಾರ್ಯಕ್ರಮ ನಡೆಯಿತು. ಹಿರಿಯ ನಿರ್ದೇಶಕ ಅಚ್ಯುತ ನಾಯಕ್ ರವರು ಅಕಾಲಿಕ ನಿಧನರಾಗಿದ್ದು ಇವರ ಸೇವೆಯನ್ನು ಸ್ಮರಿಸುತ್ತಾ ಮಹಾಸಭೆಯಲ್ಲಿ ಮೌನ ಪ್ರಾರ್ಥನೆ ನಡೆಸಲಾಯಿತು.
2022-23ನೇ ಸಾಲಿನಲ್ಲಿ ಸಂಘದ ಸದಸ್ಯರ ಅವಶ್ಯಕತೆಗಳಿಗುಣವಾಗಿ 28.71 ಕೋಟಿ ಸಾಲ ನೀಡಲಾಗಿದ್ದು ಈ ಪೈಕಿ 13.11 ಕೋಟಿಯಷ್ಟು ಬೆಳೆಸಾಲವನ್ನು 0% ಬಡ್ಡಿ ದರದಲ್ಲಿ ಮಂಗಳಾ ಕಿಸಾನ್ ಕ್ರೆಡಿಟ್ ಕಾರ್ಡು ಹೊಂದಿದ ರೈತ ಸದಸ್ಯರಿಗೆ ವಿತರಿಸಲಾಗಿದೆ. ಶೇಕಡಾ 3%ರ ಬಡ್ಡಿದರದಲ್ಲಿ ಕೃಷಿ ಸಾಲವಾಗಿ ರೈತರಿಗೆ 98.99 ಲಕ್ಷ ವರದಿ ಸಾಲಿನಲ್ಲಿ ನೀಡಲಾಗಿರುತ್ತದೆ. ವಸೂಲಾತಿಯು 26.20 ಕೋಟಿಯಷ್ಟಾಗಿದ್ದು ವಾರ್ಷಿಕ ಶೇಕಡಾ 95.31 ರಷ್ಟು ವಸೂಲಿ ಬಂದಿದೆ.
2022-23ನೇ ಸಾಲಿನಲ್ಲಿ ಸಂಘವು 186.78 ಕೋಟಿ ವ್ಯವಹಾರ ಮಾಡಿ, ರೂ.83,96,347.41/- ಲಾಭ ಗಳಿಸಿದ್ದು ವರದಿ ಸಾಲಿನಲ್ಲಿ ಸಂಘವನ್ನು “ಎ” ತರಗತಿಯಲ್ಲಿ ವರ್ಗೀಕರಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಶೇಕಡಾ 80ಕ್ಕಿಂತ ಅಧಿಕ ಅಂಕ ಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು. ಸಂಘದಲ್ಲಿ ಸುಮಾರು 36 ವರ್ಷಗಳ ಕಾಲ ವಿವಿಧ ಹುದ್ದೆಗಳನ್ನು ಅಲಂಕರಿಸಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಶಶಿಕಲಾ ಕೆ.ಪಿ ಇವರಿಗೆ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ವಿಟ್ಲ ವ್ಯವಸಾಯ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ಮಹಾಬಲೇಶ್ವರ ಭಟ್, ನಿರ್ದೇಶಕರಾದ ಉದಯ ಕುಮಾರ್, ದಯಾನಂದ ಶೆಟ್ಟಿ ಉಜಿರೆಮಾರ್, ಸದಾನಂದ ಗೌಡ, ರಾಘವೇಂದ್ರ ಪೈ, ದಿನೇಶ ಕೆ, ವಾಸು ಸಿ. ಹೆಚ್, ಶಿವಪ್ಪ ನಾಯ್ಕ, ಗೌರಿ ಎಸ್ ಎನ್ ಭಟ್, ಸಂಗೀತಾ ಯನ್, ಕವಿತಾ ಕೆ. ಯಲ್ ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿ ಭುವನೇಶ್ವರ ಬಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ತುಳಸಿದಾಸ್ ಶೆಣೈ ಪ್ರಾರ್ಥಿಸಿ, ದಯಾನಂದ ಶೆಟ್ಟಿ ಉಜಿರೆಮಾರ್ ಸ್ವಾಗತಿಸಿ, ಶೋಭಾ ಕೆ. ಕಾರ್ಯಕ್ರಮ ನಿರೂಪಿಸಿದರು. ಸಂಘದ ಉಪಾಧ್ಯಕ್ಷ ಮಹಾಬಲೇಶ್ವರ ಭಟ್ ವಂದಿಸಿದರು.