
ಪುನೀತ್ ರಾಜ್ಕುಮಾರ್ ಕನಸಿನ ಪ್ರಾಜೆಕ್ಟ್ ಗಂಧದ ಗುಡಿ ಟ್ರೇಲರ್ ಇಂದು ಬಿಡುಗಡೆ ಆಗಿದೆ. ಅಪ್ಪು ಈ ಡಾಕ್ಯುಮೆಂಟರಿ ಮಾದರಿಯ ಸಿನಿಮಾದ ಬಗ್ಗೆ ಅಷ್ಟೊಂದು ಕನಸು ಯಾಕೆ ಕಂಡಿದ್ದರು ಎನ್ನುವುದಕ್ಕೆ ಟ್ರೈಲರ್ ನಲ್ಲಿ ತೋರಿಸಿದ ಒಂದೊಂದು ಫ್ರೇಮೂ ಸಾಕ್ಷಿಯಾಗಿವೆ. ಟ್ರೈಲರ್ ನೋಡಿದ ತಕ್ಷಣ ಮೂಡುವ ಒಂದೇ ಭಾವ, ಪುನೀತ್ ರಾಜ್ಕುಮಾರ್ ನೀವು ಇರಬೇಕಿತ್ತು. ಈ ಗಂಧದ ಗುಡಿಯಲ್ಲಿ ಇನ್ನಷ್ಟು ಕಾಲ ಬಾಳಬೇಕಿತ್ತು.

ಗಂಧದ ಗುಡಿಯಲ್ಲಿ ಏನಿಲ್ಲ, ಎಲ್ಲವೂ ಇದೆ. ಬೆಟ್ಟ, ಗುಡ್ಡ, ನದಿ, ಹಳ್ಳ, ಕೊಳ್ಳ, ಅರಣ್ಯ, ಕಾಡು ಪ್ರಾಣಿಗಳು, ಕಾಡಂಚಿನ ಜನರು, ದೇವರು, ದೈವ ಎಲ್ಲವನ್ನೂ ಒಂದೇ ಉಸಿರಿಗೆ ಹಿಡಿದಿಟ್ಟಿದ್ದಾರೆ ಪುನೀತ್ ರಾಜ್ಕುಮಾರ್. ರಾತ್ರಿ ಅವರು ಕಾಡಿನೊಳಗೆ ನುಗ್ಗಿದಾಗ ನಾವೇ ಭಯಪಡುವಷ್ಟು ಸುಂದರವಾಗಿ ಸೆರೆ ಹಿಡಿದಿದ್ದಾರೆ ಆ ರಾತ್ರಿಯನ್ನು. ಸಮುದ್ರದಾಳಕ್ಕೆ ಅಪ್ಪು ಜಿಗಿದಾಗ ಇಲ್ಲಿ ನಾವೇ ಒದ್ದೆಯಾಗುವಂತೆ ಸಿನಿಮಾಟೋಗ್ರಫಿ ಇದೆ. ಎಲ್ಲವೂ ಚಂದ.
ʻಗಂಧದ ಗುಡಿʼ ಟ್ರೈಲರ್ನ ಮತ್ತೊಂದು ಸೊಗಸು ಅಂದರೆ, ಅಪ್ಪು ಹಾಗೂ ಅವರ ಅಪ್ಪಾಜಿ ಬಾಳಿ ಬದುಕಿದ ಮನೆಯನ್ನು ತೋರಿಸಿದ್ದಾರೆ. ಸ್ವತಃ ಆ ಮನೆಯ ಬಗ್ಗೆ ಪುನೀತ್ ರಾಜ್ಕುಮಾರ್ ಅವರೇ ವಿವರಿಸುತ್ತಾರೆ. ಮನೆಯನ್ನು ಕಣ್ತುಂಬಿಕೊಳ್ಳುವ ಹೊತ್ತಲ್ಲಿ ಡಾ.ರಾಜ್ ಕುಮಾರ್ ಪ್ರವೇಶ. ಥ್ರಿಲ್ ಅನಿಸುವಷ್ಟು ಮಜಾ ಕೊಡುತ್ತದೆ ಟ್ರೇಲರ್.

ಟ್ರೈಲರ್ ಗೆ ಪ್ರಧಾನಿ ನರೇಂದ್ರ ಮೋದಿಯವರು ಮೆಚ್ಚುಗೆ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ. ಗಂಧದ ಗುಡಿ ಒಂದ ಸಾಕ್ಷ್ಯಾಚಿತ್ರವಾಗಿದ್ದು, ಪುನೀತ್ ಅವರ ಒಂದು ಅದ್ಭುತ ಕನಸಾಗಿದೆ. ಈ ಸಾಕ್ಷ್ಯಾಚಿತ್ರದಲ್ಲಿ ಕರ್ನಾಟಕದ ಅರಣ್ಯಗಳು ಹಾಗೂ ವನ್ಯಜೀವಿ ಪ್ರಪಂಚದ ಅದ್ಭುತ ದೃಶ್ಯವೈಭವವಿದೆ. ಇದಕ್ಕಾಗಿ ಪುನೀತ್ ಇಡೀ ಕರುನಾಡನ್ನು ಸುತ್ತಿದ್ದರು. ಇದು ಅಪ್ಪು ಕಟ್ಟ ಕಡೆಯದಾಗಿ ಕಾಣಿಕೊಳ್ಳುವ ಸಿನಿಮಾ ಆಗಿರಲಿದೆ. ಗಂಧದ ಗುಡಿ ಟ್ರೈಲರ್ ಅನ್ನು ಅಭಿಮಾನಿಗಳ ನಡುವೆ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ನರ್ತಕಿ ಥಿಯೇಟರ್ನಲ್ಲಿ ಬಿಡುಗಡೆ ಮಾಡಿದರು. ಟ್ರೈಲರ್ ನೋಡಿ ಅಭಿಮಾನಿಗಳಲ್ಲಿ ಸಂಭ್ರಮ ಮುಗಿಲು ಮುಟ್ಟಿದೆ.

ಈ ಚಿತ್ರದ ಟ್ರೈಲರ್ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅಪ್ಪು ಪ್ರಪಂಚದಾದ್ಯಂತ ಲಕ್ಷಾಂತರ ಜನರ ಹೃದಯದಲ್ಲಿ ವಾಸಿಸುತ್ತಿದ್ದಾರೆ. ಅವರು ತೇಜಸ್ಸಿನ ವ್ಯಕ್ತಿಯಾಗಿದ್ದರು, #ಗಂಧದಗುಡಿ ಚಿತ್ರ ಪ್ರಕೃತಿ ಮಾತೆಗೆ, ಕರ್ನಾಟಕದ ನೈಸರ್ಗಿಕ ಸೌಂದರ್ಯ ಮತ್ತು ಪರಿಸರ ಸಂರಕ್ಷಣೆಗೆ ಗೌರವವಾಗಿದೆ. ಈ ಪ್ರಯತ್ನಕ್ಕೆ ನನ್ನ ಶುಭಾಶಯಗಳು. ಎಂದು ತಿಳಿಸಿದ್ದಾರೆ.

