



ಮಂಗಳೂರು: ಸುರತ್ಕಲ್ ಗ್ರಾಮದ ಮುಕ್ಕ ರೋಹನ್ ಎಸ್ಟೇಟ್ನಲ್ಲಿ ಎಸ್ಟಿಪಿ (ಒಳಚರಂಡಿ ಸಂಸ್ಕರಣಾ ಘಟಕ) ಟ್ಯಾಂಕ್ನಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಕಾರ್ಮಿಕ ಮುಖೇಶ್ ಮಂಡಲ್ ಕೊಲೆ ಪ್ರಕರಣದ ಪ್ರಮುಖ ಆರೋಪಿಯನ್ನು ಪೊಲೀಸರು ಪಶ್ಚಿಮ ಬಂಗಾಳದಿಂದ ಬಂಧಿಸಿದ್ದಾರೆ.
ಪತ್ನಿಯ ಅಶ್ಲೀಲ ವಿಡಿಯೋ ಸಂಗ್ರಹಿಸಿಟ್ಟಿದ್ದಕ್ಕಾಗಿ ಕೋಪಗೊಂಡ ಆರೋಪಿ ಈ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.ದಿನಾಂಕ 24-06-2025 ರಂದು ರಾತ್ರಿ 9 ಗಂಟೆ ಬಳಿಕ ಮುಖೇಶ್ ಮಂಡಲ್ (27) ಎಂಬಾತ ಮುಕ್ಕ ರೋಹನ್ ಎಸ್ಟೇಟ್ ಲೇಔಟ್ನಿಂದ ಕಾಣೆಯಾಗಿದ್ದ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಸುಮಾರು ಒಂದು ತಿಂಗಳ ಬಳಿಕ, ಆಗಸ್ಟ್ 21, 2025 ರಂದು ಕಾಣೆಯಾಗಿದ್ದ ಮುಖೇಶ್ನ ಮೃತದೇಹವು ಎಸ್ಟಿಪಿ ಟ್ಯಾಂಕ್ನಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇದನ್ನು ಕೊಲೆ ಎಂದು ಪೊಲೀಸರು ಶಂಕಿಸಿದ್ದರು.ಪೊಲೀಸ್ ತನಿಖೆಯ ವೇಳೆ, ಮೃತ ಮುಖೇಶ್ ಮತ್ತು ಆರೋಪಿ ಲಕ್ಷ್ಮಣ್ ಮಂಡಲ್ @ ಲಖನ್ (30) ಇಬ್ಬರೂ ಸ್ನೇಹಿತರು ಮತ್ತು ಪಶ್ಚಿಮ ಬಂಗಾಳ ಮೂಲದವರಾಗಿದ್ದು, ಒಂದೇ ಸ್ಥಳದಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಘಟನೆ ನಡೆದ ದಿನಾಂಕ 24-06-2025 ರಂದು ರಾತ್ರಿ ಇಬ್ಬರೂ ಸೇರಿ ಮದ್ಯಪಾನ ಮಾಡುತ್ತಿದ್ದರು. ಈ ವೇಳೆ, ಮುಖೇಶ್ ತನ್ನ ಮೊಬೈಲ್ನಲ್ಲಿ ಆರೋಪಿಯ ಪತ್ನಿಯ ಅಶ್ಲೀಲ ವಿಡಿಯೋಗಳನ್ನು ತೋರಿಸಿರುವುದು ಗೊತ್ತಾಗಿದೆ. ಇದರಿಂದ ಕೆರಳಿದ ಲಕ್ಷ್ಮಣ್, ಕೊಲೆ ಮಾಡುವ ಉದ್ದೇಶದಿಂದ ಪಕ್ಕದ ಕೋಣೆಯಲ್ಲಿದ್ದ ಕಬ್ಬಿಣದ ರಾಡ್ನಿಂದ ಮುಖೇಶ್ನ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ. ನಂತರ ಮೃತದೇಹವನ್ನು ಸಮೀಪದಲ್ಲಿದ್ದ ಎಸ್ಟಿಪಿ ಟ್ಯಾಂಕ್ಗೆ ಹಾಕಿ, ಪ್ಲೈವುಡ್ ಶೀಟ್ನಿಂದ ಮುಚ್ಚಿ ಕೊಲೆಯನ್ನು ಮರೆಮಾಚಿದ್ದಾನೆ.ಆರೋಪಿ ಲಕ್ಷ್ಮಣ್ ಬಂಧನಕ್ಕಾಗಿ ಸುರತ್ಕಲ್ ಪೊಲೀಸ್ ಠಾಣೆಯ ಪಿಎಸ್ಐ ಶಶಿಧರ ಶೆಟ್ಟಿ ಮತ್ತು ಎಎಸ್ಐ ರಾಜೇಶ್ ಆಳ್ವಾ ಅವರ ತಂಡವನ್ನು ರಚಿಸಿ ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿಗೆ ಕಳುಹಿಸಲಾಗಿತ್ತು. ತಂಡವು ಆರೋಪಿಯನ್ನು ಪತ್ತೆ ಹಚ್ಚಿ, ಬಂಧಿಸಿ ಮಂಗಳೂರಿಗೆ ಕರೆತಂದಿದೆ. ವಿಚಾರಣೆ ವೇಳೆ ಆರೋಪಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.ಆರೋಪಿ ಲಕ್ಷ್ಮಣ್ ಮಂಡಲ್ @ ಲಖನ್ ವಿರುದ್ಧ ಪಶ್ಚಿಮ ಬಂಗಾಳದ ರತುವಾ ಪೊಲೀಸ್ ಠಾಣೆಯಲ್ಲಿ ಈಗಾಗಲೇ ಎರಡು ಹಲ್ಲೆ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.








