




ಮುಂಬೈ: ಅಡುಗೆ ಮಾಡದೆ ಡ್ಯಾನ್ಸ್ ಕ್ಲಾಸ್ಗೆ ತೆರಳಲು ಮುಂದಾಗಿದ್ದ ಪತ್ನಿಯನ್ನು ಪತಿ ಹತ್ಯೆಗೈದ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.
ಯಾಮಿನಿ (38) ಹತ್ಯೆಯಾದ ಮಹಿಳೆ, ಆಕೆಯ ಪತಿ ಕೃಷ್ಣ ಲಾಲ್ ಯಾದವ್ (41) ಕೊಲೆ ಆರೋಪಿಯಾಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ. ಹೌಸಿಂಗ್ ಸೊಸೈಟಿಯಲ್ಲಿ ಡ್ಯಾನ್ಸ್ ಕ್ಲಾಸ್ಗೆ ಮಹಿಳೆ ಹೊರಟಿದ್ದಳು. ಈ ವೇಳೆ ಆಕೆ ಅಡುಗೆ ಮಾಡದೇ ಇದ್ದಿದ್ದಕ್ಕೆ ಕುಡಿದು ಬಂದಿದ್ದ ಪತಿ ಜಗಳ ತೆಗೆದು ಹತ್ಯೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಕೃಷ್ಣ ಲಾಲ್ ಕೆಲಸದಿಂದ ಮನೆಗೆ ಮರಳಿದಾಗ ಯಾಮಿನಿ ಬಳಿ ಅಡುಗೆ ಮಾಡಲು ತಿಳಿಸಿದ್ದ. ಆದರೆ, ಯಾಮಿನಿ ಡ್ಯಾನ್ಸ್ ಕ್ಲಾಸ್ಗೆ ತೆರಳಬೇಕು ಎಂದು ಅಡುಗೆ ಮಾಡಲು ನಿರಾಕರಿಸಿದ್ದರು. ಇದರಿಂದ ಮದ್ಯದ ಅಮಲಿನಲ್ಲಿದ್ದ ಆರೋಪಿ ತಮ್ಮ ಇಬ್ಬರು ಮಕ್ಕಳ ಮುಂದೆಯೇ ಯಾಮಿನಿಯ ಕುತ್ತಿಗೆ ಮತ್ತು ಹೊಟ್ಟೆಯ ಮೇಲೆ ಹಲ್ಲೆ ನಡೆಸಿದ್ದ.
ಹಲ್ಲೆಯ ಬಳಿಕ ಯಾಮಿನಿ ತನ್ನ ಕುತ್ತಿಗೆ ಮತ್ತು ಹೊಟ್ಟೆಯಲ್ಲಿ ತೀವ್ರ ನೋವಿದೆ ಎಂದು ಮಾತ್ರೆ ತರಲು ಪತಿಗೆ ಕೇಳಿಕೊಂಡಿದ್ದರು. ಕೃಷ್ಣ ಲಾಲ್ ಮಾತ್ರೆ ತರಲು ಹೋಗಿದ್ದಾಗ ಮೆಡಿಕಲ್ ಬಂದ್ ಆಗಿತ್ತು ಎಂದು ಖಾಲಿ ಕೈಯಲ್ಲಿ ವಾಪಸ್ ಆಗಿದ್ದ. ಈ ವೇಳೆಗಾಗಲೇ ಮಹಿಳೆಯ ಹೊಟ್ಟೆ ಊದಿಕೊಂಡು ಆರೋಗ್ಯದ ಸ್ಥಿತಿ ಗಂಭೀರವಾಗಿತ್ತು. ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಚಿಕಿತ್ಸೆ ವೇಳೆ ಅವರು ಸಾವನ್ನಪ್ಪಿದ್ದರು.
ಆರಂಭದಲ್ಲಿ ಪೊಲೀಸರು ಆಕಸ್ಮಿಕ ಸಾವು ಪ್ರಕರಣವನ್ನು ದಾಖಲಿಸಿಕೊಂಡು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು. ಮರಣೋತ್ತರ ಪರೀಕ್ಷೆ ವರದಿಯಲ್ಲಿ ಕುತ್ತಿಗೆಯ ಮೂಳೆ ಮುರಿತ ಮತ್ತು ಕರುಳಿಗೆ ತೀವ್ರ ಹಾನಿ ಸೇರಿದಂತೆ ಗಂಭೀರ ಗಾಯಗಳಾಗಿರೋದು ಗೊತ್ತಾಗಿತ್ತು. ಬಳಿಕ ಪತಿಯನ್ನು ವಿಚಾರಣೆ ನಡೆಸಿದಾಗ ಹಲ್ಲೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ. ಈ ವಿಚಾರ ಗೊತ್ತಾಗುತ್ತಿದ್ದಂತೆ ಪತಿ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡು ಆತನನ್ನು ಬಂಧಿಸಲಾಗಿದೆ.








