





ಜೈಪುರ: ಪಾಕಿಸ್ತಾನದ ಐಎಸ್ಐ ಪರ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ರಾಜಸ್ಥಾನದ ಸರ್ಕಾರಿ ನೌಕರನನ್ನ ಜೈಸಲ್ಮೇರ್ನಲ್ಲಿ ಬಂಧಿಸಲಾಗಿದೆ.
ಬಂಧಿತ ಸರ್ಕಾರಿ ನೌಕರನನ್ನ ಶಕುರ್ ಖಾನ್ ಮಂಗನಿಯಾರ್ ಎಂದು ಗುರುತಿಸಲಾಗಿದೆ. ಜೈಸಲ್ಮೈರ್ನಲ್ಲಿರುವ ಕಚೇರಿಯಲ್ಲೇ ಸಿಐಡಿ ಮತ್ತು ಗುಪ್ತಚರ ಸಂಸ್ಥೆಗಳ ತಂಡವು ಜಂಟಿಯಾಗಿ ಬಂಧಿಸಿವೆ.
ರಾಜಸ್ಥಾನದಲ್ಲಿ ಸರ್ಕಾರಿ ನೌಕರನಾಗಿದ್ದ ಶಕುರ್ ಖಾನ್ ಗಡಿ ಪ್ರದೇಶದ ಬರೋಡಾ ಗ್ರಾಮದವನು. ಈತನ ಮೇಲೆ ಬಹಳ ದಿನಗಳಿಂದ ನಿಗಾ ಇಡಲಾಗಿತ್ತು ಎನ್ನಲಾಗಿದೆ. ಸದ್ಯ ಹೆಚ್ಚಿನ ವಿಚಾರಣೆಗಾಗಿ ಜೈಪುರಕ್ಕೆ ಸ್ಥಳಾಂತರಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಎರಡೂ ತನಿಖಾ ತಂಡಗಳು ಜಂಟಿಯಾಗಿಯೇ ವಿಚಾರಣೆ ನಡೆಸಲಿವೆ. ಪ್ರಾಥಮಿಕ ವಿಚಾರಣೆ ವೇಳೆ ಆರೋಪಿ ದೆಹಲಿಯಲ್ಲಿರುವ ಪಾಕಿಸ್ತಾನಿ ಹೈಕಮಿಷನ್ನೊಂದಿಗೆ ಸಂಪರ್ಕದಲ್ಲಿದ್ದ ಅನ್ನೋದು ಪತ್ತೆಯಾಗಿದೆ.
ಅಲ್ಲದೇ ಪಾಕಿಸ್ತಾನಕ್ಕೆ ಸಂಬಂಧಿಸಿದ ಹಲವಾರು ಫೋನ್ ಸಂಖ್ಯೆಗಳು (+92 ರಿಂದ ಪ್ರಾರಂಭವಾಗುವ ಮೊಬೈಲ್ ಸಂಖ್ಯೆಗಳು) ಇತನ ಮೊಬೈಲ್ನಲ್ಲಿ ಪತ್ತೆಯಾಗಿದೆ. ಜೊತೆಗೆ ಕಳೆದ ಕೆಲ ವರ್ಷಗಳಲ್ಲಿ 7 ಬಾರಿ ಪಾಕಿಸ್ತಾನಕ್ಕೆ ಭೇಟಿ ನೀಡಿರುವುದಾಗಿ ಶಕುರ್ ಖಾನ್ ಒಪ್ಪಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಇನ್ನೂ ಶಕುರ್ ಖಾನ್ ಗುಪ್ತಚರ ಅಧಿಕಾರಿಗಳ ಬಲೆಗೆ ಬೀಳುತ್ತಿದ್ದಂತೆ ಮೊಬೈಲ್ ಮತ್ತು ಡಿಲಿಟಲ್ ಡಿವೈಸ್ಗಳಲ್ಲಿದ್ದ ಹಲವಾರು ಪ್ರಮುಖ ಫೈಲ್ಗಳನ್ನ ಡಿಲೀಟ್ ಮಾಡಲಾಗಿದೆ. ಹೀಗಾಗಿ ಸದ್ಯಕ್ಕೆ ಆತನ ಮೊಬೈಲ್ನಿಂದ ಯಾವುದೇ ಸೂಕ್ಷ್ಮ ಮಾಹಿತಿಗಳು ರವಾನೆಯಾಗಿರುವ ಬಗ್ಗೆ ಸಾಕ್ಷ್ಯಗಳು ಸಿಕ್ಕಿಲ್ಲ. ಹೊರತುಪಡಿಸಿ ಆತನ ಬ್ಯಾಂಕ್ ಖಾತೆ ಮೇಲೂ ನಿಗಾ ವಹಿಸಲಾಗಿದೆ.
ಸದ್ಯ ಯೂಟ್ಯೂಬರ್ ಜ್ಯೋತಿಒ ಮಲ್ಹೋತ್ರಾ ಸೇರಿದಂತೆ ಕಳೆದ ಎರಡು ವಾರಗಳಲ್ಲಿ ಒಟ್ಟು ಬಂಧಿತ ಪಾಕಿಸ್ತಾನಿ ಸ್ಪೈಗಳ ಸಂಖ್ಯೆ 16 ದಾಟಿದೆ.