ಪುತ್ತೂರು: ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಅವರು ವಿಜಯಶಾಲಿಯಾಗುತ್ತಿದ್ದಂತೆ ಪುತ್ತೂರಿನ ಪ್ರಮುಖ ರಸ್ತೆಗಳಲ್ಲಿ ಕಾರ್ಯಕರ್ತರು ಕಾಂಗ್ರೆಸ್ ಬಾವುಟಗಳನ್ನು ಹಾರಿಸಿ ವಿಜಯೋತ್ಸವ ನಡೆಸಿದರು. ಕಬಕದಲ್ಲಿ ಅಶೋಕ್ ರೈ ಅಭಿಮಾನಿಗಳು ಒಟ್ಟುಸೇರಿ ಅಶೋಕ್ ಕುಮಾರ್ ರೈ ಅವರಿಗೆ ಅದ್ಧೂರಿ ಸ್ವಾಗತ ಕೋರಿದರು.
ತೆರೆದ ವಾಹನಗಳ ಮೂಲಕ ಆಗಮಿಸಿದ ಕಾರ್ಯಕರ್ತರು ಕಾಂಗ್ರೆಸ್ ಧ್ವಜವನ್ನು ಹಾರಿಸಿಕೊಂಡು ಸಂತಸವನ್ನು ಹಂಚಿಕೊಂಡರು. ವಿಟ್ಲ ಅಳಿಕೆ, ಪೆರುವಾಯಿ, ಮಾಣಿಲ, ಪುತ್ತೂರು ತಾಲೂಕಿನ ವಿವಿಧ ಭಾಗದ ಜನರು ಇಲ್ಲಿ ಜಮಾಯಿಸಿದರು. ಮಾಣಿ – ಮೈಸೂರು ಹೆದ್ದಾರಿಯ ಮಿತ್ತೂರಿನಿಂದ ಪೋಳ್ಯದ – ವರೆಗೆ ಸುಮಾರು ಎರಡು ಕಿ ಮೀ ಉದ್ದಕ್ಕೂ ರೈ ಅಭಿಮಾನಿಗಳು ರಸ್ತೆಯ ಇಕ್ಕೆಲೆಗಳಲ್ಲಿ ಸೇರಿ ರೈ ಅವರನ್ನು ಸ್ವಾಗತಿಸಿದರು. ರೈ ಅವರಿದ್ದ ವಾಹನಕ್ಕೆ ಹೂವಿನ ಮಳೆಗರೆದರು. ಬಳಿಕ ಪುತ್ತೂರಿನವರೆಗೆ ಸಾವಿರಾರು ವಾಹನಗಳ ಮೂಲಕ ಮೆರವಣಿಗೆಯಲ್ಲಿ ಆಗಮಿಸಿದರು.
ಆ ನಂತರ ಇತಿಹಾಸ ಪ್ರಸಿದ್ಧ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಬೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು. ತಮ್ಮ ನೆಚ್ಚಿನ ನಾಯಕ ಶಾಸಕನಾಗಿ ಆಯ್ಕೆಯಾಗಿರುವುದಕ್ಕೆ ಸಂತಸ ವ್ಯಕ್ತ ಪಡಿಸಿದ ಕಾರ್ಯಕರ್ತರು ಹಾಗೂ ಮುಖಂಡು ಹೂಹಾರ ಹಾಕಿ ಸಂಭ್ರಮಿಸಿದರು.
ದರ್ಗಾ ಹಾಗೂ ಚರ್ಚ್ಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಪುತ್ತೂರು ಕೇಂದ್ರ ಜುಮ್ಮಾ ಮಸೀದಿ ವಠಾರದಲ್ಲಿರುವ ಪುತ್ತೂರು ತಂಙಳ್ ದರ್ಗಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಅವರ ಜೊತೆಗೆ ಪ್ರಮುಖರು ಉಪಸ್ಥಿತರಿದ್ದರು.