ಮದರಸಾದಲ್ಲಿ ನೇಣು ಬಿಗಿದುಕೊಂಡು ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ತಿರುವನಂತಪುರಂನ ಬಲರಾಮಪುರಂನ ಅಲ್ ಅಮಾನ್ ಧಾರ್ಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ. ವಿದ್ಯಾರ್ಥಿನಿ ಆತ್ಮಹತ್ಯೆಗೆ ಹಿಂದೆ ನಿಗೂಢತೆ ಇದೆ ಎಂದು ಆರೋಪಿಸಿ ಪೋಷಕರು ಬಲರಾಮಪುರಂ ಪೊಲೀಸರಿಗೆ ದೂರು ನೀಡಿದ್ದಾರೆ. ಅಸ್ಮಿಯಾ (17) ಆತ್ಮಹತ್ಯೆಗೆ ಶರಣಾದ ಬಾಲಕಿ.
ಅಸ್ಮಿಯಾ ಬಲರಾಮಪುರಂನಲ್ಲಿರುವ ಧಾರ್ಮಿಕ ಅಧ್ಯಯನ ಕೇಂದ್ರದಲ್ಲಿಯೇ ಇದ್ದುಕೊಂಡು ಅಧ್ಯಯನ ನಡೆಸುತ್ತಿದ್ದರು. ಮದರಸಾದ ಸಿಬ್ಬಂದಿ/ಆಡಳಿತ ವರ್ಗ ವಿದ್ಯಾರ್ಥಿನಿಗೆ ಚಿತ್ರಹಿಂಸೆ ನೀಡಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ.
ಕಳೆದ ಹಬ್ಬದ ನಂತರ ಬಾಲಕಿ ಸಂಸ್ಥೆಯ ವಿರುದ್ಧ ದೂರು ನೀಡಿದ್ದಾಳೆ ಎಂದು ಸಂಬಂಧಿಕರು ತಿಳಿಸಿದ್ದಾರೆ. ಕಳೆದ ದಿನ 2 ಗಂಟೆಗೆ ಬಾಲಕಿ ತನ್ನ ತಾಯಿಗೆ ಕರೆ ಮಾಡಿ ಕೂಡಲೇ ಬಲರಾಮಪುರಕ್ಕೆ ಬರುವಂತೆ ಹೇಳಿದ್ದಾಳೆ. ಒಂದೂವರೆ ಗಂಟೆಯೊಳಗೆ ತಲುಪಿದಾಗ ತಾಯಿಗೆ ಮಗುವನ್ನು ನೋಡಲು ಮೊದಲು ಬಿಡಲಿಲ್ಲ. ಇದಾದ ಬಳಿಕ ವಿದ್ಯಾರ್ಥಿನಿ ಮದರಸಾದ ಬಾತ್ ರೂಂನಲ್ಲಿ ಶವವಾಗಿ ಬಿದ್ದಿರುವುದು ವರದಿಯಾಗಿದೆ. ಘಟನೆ ಸಂಬಂಧ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.