


ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಇಂಗಳಿ ಗ್ರಾಮದಲ್ಲಿ ಶನಿವಾರ ರಾತ್ರಿ ಶ್ರೀರಾಮಸೇನೆ ಕಾರ್ಯಕರ್ತರ ಮೇಲೆ ಭೀಕರ ಹಲ್ಲೆಯ ಘಟನೆ ನಡೆದಿದೆ. ಆರರಿಂದ ಏಳು ಜನ ಕಾರ್ಯಕರ್ತರನ್ನು ದುಷ್ಕರ್ಮಿಗಳ ಗುಂಪು ತೆಂಗಿನ ಗಿಡಕ್ಕೆ ಕಟ್ಟಿಹಾಕಿ, ಮನಸೋ ಇಚ್ಛೆ ಹಿಗ್ಗಾಮುಗ್ಗಾ ಥಳಿಸಿದ ಆಘಾತಕಾರಿ ಘಟನೆಯ ಆರೋಪವಿದೆ. ಈ ಘಟನೆಯಿಂದ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದ್ದು, ಶ್ರೀರಾಮಸೇನೆ ಕಾರ್ಯಕರ್ತರು ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಘಟನೆಯ ಹಿನ್ನೆಲೆ:
ಹುಕ್ಕೇರಿ ತಾಲೂಕಿನ ಗೋಶಾಲೆಯಿಂದ ಜಾನುವಾರುಗಳನ್ನು ವಾಹನದಲ್ಲಿ ಕಸಾಯಿಖಾನೆಗೆ ರವಾನಿಸುತ್ತಿರುವ ಅನುಮಾನದ ಮೇಲೆ ಶ್ರೀರಾಮಸೇನೆ ಕಾರ್ಯಕರ್ತರು ಆ ವಾಹನವನ್ನು ಬೆನ್ನಟ್ಟಿದ್ದಾರೆ ಎನ್ನಲಾಗಿದೆ. ವಾಹನವು ಇಂಗಳಿ ಗ್ರಾಮಕ್ಕೆ ತಲುಪಿದಾಗ, ಕಾರ್ಯಕರ್ತರು ಅದನ್ನು ತಡೆಯಲು ಯತ್ನಿಸಿದ್ದಾರೆ ಎಂದು ಹೇಳಿದ್ದಾರೆ. ಆದರೆ, ಈ ವೇಳೆ ಗ್ರಾಮದ ಕೆಲವು ವ್ಯಕ್ತಿಗಳು ಕಾರ್ಯಕರ್ತರ ಮೇಲೆ ದಾಳಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.ದುಷ್ಕರ್ಮಿಗಳು ಕಾರ್ಯಕರ್ತರನ್ನು ತೆಂಗಿನ ಗಿಡಕ್ಕೆ ಕಟ್ಟಿಹಾಕಿದ್ದಲ್ಲದೇ, ತೀವ್ರವಾಗಿ ಹೊಡೆದಿದ್ದಾರೆ ಎನ್ನಲಾಗಿದೆ. ಕೆಲವರಿಗೆ ನೀರು ಕುಡಿಸಿ ಮತ್ತೆ ಮತ್ತೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಈ ದಾಳಿಯಿಂದ ಕಾರ್ಯಕರ್ತರಿಗೆ ಗಂಭೀರ ಗಾಯಗಳಾಗಿವೆ ಎಂದು ವರದಿಯಾಗಿದೆ.ಹಲ್ಲೆಗೊಳಗಾದ ಶ್ರೀರಾಮಸೇನೆ ಕಾರ್ಯಕರ್ತರು ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಎಫ್ಐಆರ್ ದಾಖಲಿಸಿದ್ದು, ತನಿಖೆ ಆರಂಭಿಸಿದ್ದಾರೆ.