ಪೋಷಕರ ವಿರೋಧದ ನಡುವೆಯೂ ಯುವಕ ಮತ್ತು ಯುವತಿ ಪೊಲೀಸ್ ಠಾಣೆಯ ಎದುರಿನಲ್ಲಿ ಮಾಂಗಲ್ಯ ಧಾರಣೆ ಮಾಡಿದ ಘಟನೆ ಧಾರವಾಡದ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಧಾರವಾಡ ತಾಲೂಕಿನ ಬಾಡ ಗ್ರಾಮದ ಮಂಜುನಾಥ ಮಾಯಕಾರ ಅದೇ ಗ್ರಾಮದ ಉಮೆಕುಲ್ಸುಮಾ ಕರಿಗಾರಳನ್ನು ಪ್ರೀತಿ ಮಾಡುತ್ತಿದ್ದನು. ಆದರೆ ಯುವತಿಯ ಪೋಷಕರು ನೀಡಿದ ದೂರಿನ ಅನ್ವಯ ಯುವಕನನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಈ ವಿಚಾರ ತಿಳಿದ ಬಜರಂಗದಳ ಠಾಣೆಗೆ ಆಗಮಿಸಿ ಈ ಜೋಡಿಯನ್ನು ಒಂದು ಮಾಡಿದೆ. ಮಂಜುನಾಥ ಮಾಯಕಾರ ಮತ್ತು ಉಮೆಕುಲ್ಸುಮಾ ಕರಿಗಾರ ಒಂದೇ ಗ್ರಾಮದವರಾಗಿದ್ದು, ಇವರಿಬ್ಬರು ಹಲವಾರು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ ಯುವತಿಯ ಪ್ರೀತಿಗೆ ಮನೆಯವರಿಂದ ವಿರೋಧವಿತ್ತು. ಕೊನೆಗೆ ಪರಸ್ಪರ ಮೆಚ್ಚಿಕೊಂಡು ಜೋಡಿಗಳು ರಿಜಿಸ್ಟರ್ ವಿವಾಹ ಆಗಿದ್ದರು.
ಇತ್ತ ವಿವಾಹವಾದ ಸುದ್ದಿ ತಿಳಿದ ಯುವತಿ ಮನೆಯವರು ಪೊಲೀಸ್ ಠಾಣೆಗೆ ತೆರಳಿ ಕಿಡ್ನಾಪ್ ಕೇಸ್ ಕೂಡ ದಾಖಲಿಸಿದ್ದರು. ಹೀಗಾಗಿ ಗ್ರಾಮೀಣ ಠಾಣೆ ಪೊಲೀಸರು ಮಂಜುನಾಥನ ಮನೆಯವರನ್ನು ಠಾಣೆಗೆ ಕರೆಯಿಸಿಕೊಂಡಿದ್ದರು. ಮಾತ್ರವಲ್ಲದೆ, ಪೊಲೀಸರ ಒತ್ತಡಕ್ಕೆ ಉಮೆಕುಲ್ಸುಮಾಳನ್ನು ಮಂಜುನಾಥ ಠಾಣೆಗೆ ಕರೆತಂದಿದ್ದ. ಠಾಣೆಗೆ ಬಂದ ಯುವತಿಯನ್ನು ಪೊಲೀಸರು ಸಾಂತ್ವನ ಕೇಂದ್ರಕ್ಕೆ ರವಾನಿಸಿ, ಯುವಕನನ್ನು ವಶಕ್ಕೆ ಪಡೆದಿದ್ದರು. ಆದರೆ ಈ ವಿಚಾರ ತಿಳಿದಂತೆ ಬಜರಂಗದಳ ಪೊಲೀಸರ ವಿರುದ್ಧ ಠಾಣೆ ಎದುರಿನಲ್ಲಿಯೇ ಪ್ರತಿಭಟನೆ ಮಾಡಿದ್ದಾರೆ. ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಬಳಿಕ ಬಜರಂಗದಳ ಪ್ರತಿಭಟನೆಯಿಂದ ಪೊಲೀಸರು ವಶಕ್ಕೆ ಪಡೆದಿದ್ದ ಮಂಜುನಾಥನನ್ನು ಬಿಟ್ಟಿದ್ದಾರೆ. ಅತ್ತ ಉಮೆಕುಲ್ಸುಮಾಳರನ್ನು ಸಾಂತ್ವನ ಕೇಂದ್ರದಿಂದ ಕರೆಯಿಸಲು ಒತ್ತಾಯಿಸಿದ ಬಜರಂಗದಳ ಕಾರ್ಯಕರ್ತರು ಪುನಃ ಇಬ್ಬರನ್ನು ಒಂದು ಮಾಡಿದ್ದಾರೆ.
ಬಜರಂಗದಳದ ಕಾರ್ಯಕರ್ತರು ಠಾಣೆ ಆವರಣದಲ್ಲಿಯೇ ಇಬ್ಬರಿಗೂ ಮತ್ತೊಮ್ಮೆ ಮದುವೆ ಮಾಡಿಸಿದ್ದಾರೆ. ಈ ವೇಳೆ ಯುವತಿ ತಾನು ಒಪ್ಪಿ ಮದುವೆಯಾಗಿದ್ದೇನೆ ಎಂದು ಹೇಳಿಕೆ ನೀಡಿದ್ದಾಳೆ. ಜೊತೆಗೆ ಜೀವ ಬೆದರಿಕೆ ಇದೆ ಅಂತ ಪೊಲೀಸರಿಗೆ ದೂರು ಸಲ್ಲಿಸಿದ್ದಾಳೆ.