ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಇಂದು ಪ್ರಧಾನಿ ಮೋದಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಿದ್ದಾರೆ.
ಈ ವೇಳೆ ಅಯೋಧ್ಯೆಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳ ಕುರಿತು ಸಮಾಲೋಚನೆ ನಡೆಸಿದ್ದಾರೆ. ಪ್ರಧಾನಿ ಮೋದಿ ಯೋಗಿ ಆದಿತ್ಯನಾಥ್ ಅವರಿಗೆ ಅಯೋಧ್ಯೆಯ ಅಭಿವೃದ್ಧಿ ಕೆಲಸಗಳು ನಮ್ಮ ಸಂಸ್ಕೃತಿಕ ಅತ್ಯುನ್ನತ ಹಾಗೂ ಅಭಿವೃದ್ಧಿಯ ರೂಪಾಂತರವನ್ನು ಪ್ರತಿಬಿಂಬಿಸುವಂತಿರಬೇಕು ಎಂದು ಹೇಳಿದ್ದಾರೆ ಎನ್ನಲಾಗಿದೆ.
ಈ ತಿಂಗಳಲ್ಲಿ ಇದು ಎರಡನೇ ಸಭೆಯಾಗಿದ್ದು ಇತ್ತೀಚೆಗೆ ಸ್ವತಃ ದೆಹಲಿಗೆ ತೆರಳಿ ಆದಿತ್ಯನಾಥ್, ಮೋದಿ, ಅಮಿತ್ ಶಾ, ಜೆ ಪಿ ನಡ್ಡಾ ಸೇರಿದಂತೆ ಹಲವು ಬಿಜೆಪಿ ನಾಯಕರನ್ನ ಭೇಟಿಯಾಗಿದ್ದರು. ನಿನ್ನೆ ನಡೆದ ಸಭೆಯಲ್ಲಿ ಯೋಗಿ ಆದಿತ್ಯನಾಥ್ ಅಯೋಧ್ಯೆಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳು, ರಸ್ತೆ ನಿರ್ಮಾಣ, ರೈಲ್ವೇ ಸ್ಟೇಷನ್, ಏರ್ಪೋರ್ಟ್ಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
ಅಯೋಧ್ಯೆ ಆಧ್ಯಾತ್ಮ ಮತ್ತು ಭವ್ಯತೆಯನ್ನ ಹೊಂದಿದೆ. ಇದರ ಅಭಿವೃದ್ಧಿ ಪ್ರತಿಯೊಬ್ಬ ಪ್ರವಾಸಿಗಳು ಹಾಗೂ ಭಕ್ತರಿಗೆಲ್ಲರಿಗೂ ಅನುಕೂಲಕಾರಿಯಾಗಿರಬೇಕು ಎಂದು ಮೋದಿ ಆದಿತ್ಯನಾಥ್ ಅವರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಜೊತೆಗೆ ಅಯೋಧ್ಯೆಯನ್ನ ಪ್ರತಿ ಭಾರತೀಯನ ನಗರ ಎಂದು ಕರೆದಿದ್ದಾರೆ.