ಅಯ್ಯಪ್ಪ ಮಾಲೆ ಧರಿಸಿ ಶಬರಿಮಲೆಗೆ ಪಾದಯಾತ್ರೆ ಹೊರಟಿದ್ದ ಸುಮಾರು 30 ಮಂದಿಯಿದ್ದ ತಂಡದ ಮೇಲೆ ಕಾರೊಂದು ಹರಿದ ಪರಿಣಾಮ ಒಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ಗೌರಿಬಿದನೂರು ತಾಲೂಕಿನ ವಿದುರಾಶ್ವತ್ಥ ಬಳಿ ನಡೆದಿದೆ.
ಮೃತ ದುರ್ದೈವಿ ಆಂಧ್ರ ಮೂಲದ ವೆಂಕಟೇಶ್(55) ಎಂದು ಗುರುತಿಸಲಾಗಿದೆ.
ಮಾಲೆಧಾರಿಗಳು ಆಂಧ್ರದ ಅನಂತಪುರ ಜಿಲ್ಲೆಯ ಹಿಂದೂಪುರ ಪಟ್ಟಣದಿಂದ ಚಿಕ್ಕಬಳ್ಳಾಪುರದ ಗೌರಿಬಿದನೂರಿಗೆ ಪಾದಯಾತ್ರೆ ಮೂಲಕ ಆಗಮಿಸುತ್ತಿದ್ದರು. ಈ ವೇಳೆ ಚೌಳೂರು ಕಡೆಯಿಂದ ಬಂದ ಕಾರು ಏಕಾಏಕಿ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳತ್ತ ನುಗ್ಗಿದೆ. ಆಗ ಮಾಲಾಧಾರಿಗಳು ದಿಕ್ಕಾಪಾಲಾಗಿದ್ದು, ಆದರೆ ವೆಂಕಟೇಶ್ ಮಾತ್ರ ಕಾರಿಗೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದು, ಉಳಿದವರು ಅದೃಷ್ಟವಶಾತ್ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ.ಘಟನೆಯಲ್ಲಿ ಪ್ರಹ್ಲಾದ್ ಹಾಗೂ ಮಣಿಕಂಠ ಎನ್ನುವವರಿಗೆ ಗಂಭೀರ ಗಾಯಗಳಾಗಿದೆ. ಗಾಯಾಳುಗಳನ್ನು ಗೌರಿಬಿದನೂರಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.