Friday, April 26, 2024
spot_imgspot_img
spot_imgspot_img

ಬೈಂದೂರು: ರಸ್ತೆಗೆ ಅಡ್ಡಲಾಗಿ ಜೋತು ಬಿದ್ದಿದ್ದ ವಿದ್ಯುತ್ ತಂತಿ ಕುತ್ತಿಗೆಗೆ ಸಿಲುಕಿ ಬೈಕ್ ಸವಾರ ಸಾವು!

- Advertisement -G L Acharya panikkar
- Advertisement -

ಬೈಂದೂರು: ಹೇರೂರು ಕಡೆಯ ಪಿಡಬ್ಲ್ಯೂಡಿ ರಸ್ತೆಯಲ್ಲಿ ವಿದ್ಯುತ್ ಕಂಬಗಳ ದುರಸ್ತಿ ವೇಳೆ ರಸ್ತೆಗೆ ಅಡ್ಡಲಾಗಿ ಜೋತು ಬಿದ್ದ ವಿದ್ಯುತ್ ತಂತಿ ಕುತ್ತಿಗೆಗೆ ಸಿಲುಕಿ ಬೈಕ್ ಸವಾರರೊಬ್ಬರು ಮೃತಪಟ್ಟ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ.

ಮೃತರನ್ನು ಹೇರೂರು ಗ್ರಾಮದ ಯರುಕೋಣೆ ನಿವಾಸಿ ಶೇಖರ ಶೆಟ್ಟಿ ಎಂದು ಗುರುತಿಸಲಾಗಿದೆ. ಮೇ 15ರಂದು ರಾತ್ರಿ ವಿಪರೀತ ಗಾಳಿ ಮಳೆಯಿಂದ ರಸ್ತೆಯ ಬದಿಯ ವಿದ್ಯುತ್ ತಂತಿಯ ಮೇಲೆ ಮರ ಬಿದ್ದು 2 ವಿದ್ಯುತ್ ಕಂಬಗಳು ತುಂಡಾಗಿ ಬಿದ್ದಿತ್ತು. ಈ ಬಗ್ಗೆ ಮೇ 17ರಂದು ಮೆಸ್ಕಾಂ ಇಲಾಖೆಯಿಂದ ಇವುಗಳ ದುರಸ್ತಿ ಕಾರ್ಯ ಹಾಗೂ ವಿದ್ಯುತ್ ತಂತಿಗಳನ್ನು ಅಳವಡಿಸುವ ಕಾರ್ಯ ಮಾಡಲಾಗುತ್ತಿತ್ತು.

ಆದರೆ ಗುತ್ತಿಗೆದಾರರು ಸ್ಥಳದಲ್ಲಿ ಮುಂಜಾಗ್ರತಾ ಕ್ರಮವಾಗಿ ಯಾವುದೇ ಸೂಚನಾ ಫಲಕ, ಸಿಬ್ಬಂದಿಯನ್ನು ನೇಮಿಸದೆ ದುರಸ್ತಿ ಕಾರ್ಯ ಮಾಡುತ್ತಿದ್ದು, ಕಂಬಕ್ಕೆ ವಿದ್ಯುತ್ ತಂತಿ ಜೋಡಿಸುತ್ತಿದ್ದ ಸಂದರ್ಭ ತಂತಿಯೊಂದು ತುಂಡಾಗಿ ರಸ್ತೆಗೆ ಅಡ್ಡಲಾಗಿ ಜೋತು ಬಿದ್ದಿತ್ತು. ಇದೇ ವೇಳೆ ಈ ರಸ್ತೆಯಲ್ಲಿ ಬೈಕಿನಲ್ಲಿ ಹೋಗುತ್ತಿದ್ದ ಶೇಖರ ಶೆಟ್ಟಿ ತಂತಿಯನ್ನು ಗಮನಿಸದ ಕಾರಣ ತಂತಿ ಅವರ ಕುತ್ತಿಗೆ ಭಾಗಕ್ಕೆ ಸಿಲುಕಿಕೊಂಡಿತು. ಇದರಿಂದ ಅವರ ಕುತ್ತಿಗೆ ಮುರಿದು ಗಂಭೀರ ಗಾಯಗೊಂಡ ಅವರು ಸ್ಥಳದಲ್ಲಿಯೇ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!